ವಿನಯ್ ಇಲ್ಲದಿದ್ದರೂ ಸಾಗರದಂತೆ ಹರಿದು ಬಂದ ಜನ
ಶಕ್ತಿ ಪ್ರದರ್ಶಿಸಿದ ಶಿವಲೀಲಾ ಕುಲಕರ್ಣಿ
ಧಾರವಾಡ ಪ್ರಜಾಕಿರಣ.ಕಾಮ್ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದು, ಇಂದು ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಶಕ್ತಿ ಪ್ರದರ್ಶನದೊಂದಿಗೆ ಅಧಿಕೃತವಾಗಿ ವಿನಯ್ ಅವರ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಧಾರವಾಡದ ಮುರುಘಾಮಠದಿಂದ ಮೆರವಣಿಗೆ ಮೂಲಕ ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಗೆ ಬಂದ ಶಿವಲೀಲಾ ಅವರು, ವಿನಯ್ ಅವರ ನಾಮಪತ್ರ ಸಲ್ಲಿಸಿದರು.
ವಿನಯ್ ಕುಲಕರ್ಣಿ ಸ್ಪರ್ಧೆಯಿಂದ ಧಾರವಾಡ ಗ್ರಾಮೀಣ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ವಿನಯ್ ಅವರ ಮೇಲಿನ ಅಭಿಮಾನಕ್ಕಾಗಿ ಅವರ ನಾಮಪತ್ರ ಸಲ್ಲಿಕೆ ವೇಳೆ ಅಪಾರ ಪ್ರಮಾಣದ ಜನ ಆಗಮಿಸಿ ವಿನಯ್ ಅವರ ಮುಖವಾಡ ಧರಿಸಿ ವಿನಯ್ ಇಲ್ಲದಿದ್ದರೂ ಅವರಂತೆಯೇ ಗೋಚರಿಸಿ ರ್ಯಾಲಿಯಲ್ಲಿ ಗಮನಸೆಳೆದರು.
ಈ ರ್ಯಾಲಿಯಲ್ಲಿ ವಿನಯ್ ಅವರ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಪಾಲ್ಗೊಂಡು ಜನರತ್ತ ಕೈಬೀಸಿ ತಮ್ಮ ತಂದೆಯನ್ನು ಬೆಂಬಲಿಸುವಂತೆ ಮನವಿ ಮಾಡಿ ಗಮನ ಸೆಳೆದರು.
ಶಿವಲೀಲಾ ಅವರು ಉಪವಿಭಾಗಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದ ವೇಳೆ ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಸಾಥ ನೀಡಿದರು.
ಒಟ್ಟಾರೆ ವಿನಯ್ ಕುಲಕರ್ಣಿ ಅವರ ನಾಮಪತ್ರ ಅದ್ಧೂರಿ ಶಕ್ತಿ ಪ್ರದರ್ಶನದೊಂದಿಗೆ ಸಲ್ಲಿಕೆಯಾಗಿದೆ.