ಬೃಹತ್ ಜನ ಸಾಗರದ ಜೊತೆಗೆ ಬಂದು ನಾಮಪತ್ರ ಸಲ್ಲಿಸಿದ ಬಸವರಾಜ ಕೊರವರ, ತವನಪ್ಪ ಅಷ್ಟಗಿ
ಧಾರವಾಡದ ಜೋಡೆತ್ತುಗಳಿಗೆ ಸಾಥ್ ನೀಡಿದ ಸರ್ವಜನಾಂಗದ ಮತದಾರ ಬಾಂಧವರು
ಬಡವರ ಮಕ್ಕಳ ಶಕ್ತಿ ಪ್ರದರ್ಶನ
ಧಾರವಾಡ ಪ್ರಜಾಕಿರಣ. ಕಾಮ್ : ಜಗ್ಗಲಗಿ, ಯುವಕರ ಹಾಗೂ ಮಹಿಳೆಯರ ಡೊಳ್ಳು, ಝಾಂಜ್, ಕೋಲಾಟ, ಹತ್ತು ಹಲವು ಕಲಾಪ್ರಕಾರದ ಅದ್ಧೂರಿ ಮೆರವಣಿಗೆ ಧಾರವಾಡದ ಶಿವಾಜಿ ವೃತ್ತದಿಂದ ಜನಸಾಗರದ ದಂಡು ಇತ್ತ ಆಲೂರು ವೆಂಕಟರಾಯರ ವೃತ್ತದವರೆಗೆ ಬಂದು ತಲುಪಿತ್ತು.
ಧಾರವಾಡ ಗ್ರಾಮೀಣ ಜನತೆಯ ಸ್ವಾಭಿಮಾನಿ ಹೋರಾಟದ ಪ್ರತೀಕವಾಗಿ
ಬಡವರ ಮಕ್ಕಳ ಜನಸೇವೆ ಮಾಡಲು, ಬಡವರ ಮಕ್ಕಳ ಧ್ವನಿ ವಿಧಾನಸೌಧಕ್ಕೆ ಹೋಗಬೇಕು ಎಂಬ ಎಕೈಕ ಕಾರಣಕ್ಕಾಗಿ ಜೊಡೆತ್ತುಗಳಾಗಿ ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿ ಇಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಜಂಟಿಯಾಗಿ
ಬೃಹತ್ ಮೆರವಣಿಗೆ ಮೂಲಕ ಆಗಮಿಸಿದರು.
ಜನರ ಅಭಿಮಾನ, ಪ್ರೀತಿ, ವಿಶ್ವಾಸ, ಅದಮ್ಯ ಚೇತನ, ಹೂವಿನ ಸುರಿಮಳೆಯ ರೂಪದಲ್ಲಿ ಹರಿದು ಬಂದರೆ, ಜಯಘೋಷಗಳು ಮುಗಿಲು ಮುಟ್ಟಿದ್ದವು.
ಈ ಅದ್ಧೂರಿ ದೃಶ್ಯಗಳನ್ನು ತಮ್ಮ ಕಣ್ಣಾರೆ ಕಂಡ ಇಬ್ಬರು ಜನಸೇವಕರು ಮೂಕವಿಸ್ಮಿತರಾಗಿ ಭಾವುಕರಾದರು. ಅವರಿಗೆ ಶಿರಬಾಗಿ ನಮಸ್ಕರಿಸಿ ಗೌರವ ಸಮರ್ಪಿಸಿದರು.
ಹೌದು! ಇದು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ-71ರ ಚುನಾವಣಾ ಕಣ ರಂಗೇರುವಂತೆ ಮಾಡಿದೆ.
ಧಾರವಾಡ ಗ್ರಾಮೀಣ ಜನರ ಶಕ್ತಿ ಪ್ರದರ್ಶನದೊಂದಿಗೆ ಅಧಿಕೃತವಾಗಿ ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಉಮೇದುವಾರಿಕೆ ಸಲ್ಲಿಸಿದರು.
ಧಾರವಾಡದ ಶಿವಾಜಿ ಪತ್ರಿಮೆ, ಡಾ.ಬಿ ಆರ್. ಅಂಬೇಡ್ಕರ್, ವಿಶ್ವಗುರು ಬಸವಣ್ಣ ಪತ್ರಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಗೆ ಬಂದು ಇಬ್ಬರು ಪ್ರತ್ಯೇಕವಾಗಿ ತಮ್ಮ ನಾಮಪತ್ರ ಸಲ್ಲಿಸಿದರು.
ಇವರಿಬ್ಬರ ಪ್ರವೇಶದಿಂದಾಗಿ ಚುನಾವಣಾ ಅಖಾಡ ರಂಗೇರಿದ್ದು, ಸ್ವಾಭಿಮಾನಿಗಳ, ಬಡವರ ಹಾಗೂ ಇಬ್ಬರು ರಾಷ್ಟ್ರೀಯ ಪಕ್ಷದ ಬಲಿಷ್ಟ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಎರ್ಪಟ್ಟಂತಾಗಿದೆ.
ಈ ಸ್ಪರ್ಧೆಯಿಂದ ಧಾರವಾಡ ಗ್ರಾಮೀಣ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗಿ ಹೊರಹೊಮ್ಮಿದೆ. ಬಡವರ ಮಕ್ಕಳ ಸ್ವಾಭಿಮಾನಿ ಹೋರಾಟಕ್ಕಾಗಿ ಅವರ ನಾಮಪತ್ರ ಸಲ್ಲಿಕೆ ವೇಳೆ ಸಹಸ್ರ ಸಹಸ್ರ ಜನ ಸಾಕ್ಷಿಯಾದರು.
ರಸ್ತೆಯ ಇಕ್ಕೆಲಗಳಲ್ಲೂ ಜನ ನಿಂತು ರ್ಯಾಲಿಗೆ ಹೂಮಳೆ ಸುರಿಸಿ ಶುಭ ಹಾರೈಸಿದರು.
ಈ ರ್ಯಾಲಿಯಲ್ಲಿ ತವನಪ್ಪ ಅಷ್ಟಗಿ ಅವರ ಧರ್ಮಪತ್ನಿ ಕಸ್ತೂರಿ ತವನಪ್ಪ ಅಷ್ಟಗಿ, ಬಸವರಾಜ ಕೊರವರ ಧರ್ಮಪತ್ನಿ ಸುಮಂಗಲಾ ಬಸವರಾಜ ಕೊರವರ, ನಾಗರಾಜ ಕಿರಣಗಿ, ದತ್ತಾ ಡೋರ್ಲೆ, ಭೂಮನಗೌಡರ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡು ಪ್ರತಿಯೊಬ್ಬರಿಗೂ ಕೈ ಮುಗಿದು ಪ್ರೀತಿಯ ಆರ್ಶೀವಾದ ಮಾಡುವಂತೆ ಕೋರಿದರು.
ತೆರೆದ ವಾಹನದ ಮೂಲಕ ಬಸವರಾಜ ಕೊರವರ, ತವನಪ್ಪ ಅಷ್ಟಗಿ ಬೃಹತ್ ಮೆರವಣಿಗೆ ನಡೆಸಿದರು.
ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಹಳ್ಳಿ, ನಗರದ ವಿವಿಧ ಬಡಾವಣೆಗಳಿಂದಲೂ ಜನ ಸ್ವಯಂ ಪ್ರೇರಿತರಾಗಿ
ವಾಹನಗಳ ಮೂಲಕ ಬಂದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.