ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಬಿ ಸಿ ಎಂ ಹಾಸ್ಟೆಲ್ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದರೂ, ವಸತಿ ಸೌಕರ್ಯ ಮರಿಚಿಕೆ ಆಗಿ ಉಳಿದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಧಾರವಾಡದ ಮಿನಿ ವಿಧಾನಸೌಧದಲ್ಲಿರುವ ಬಿಸಿಎಂ ಜಿಲ್ಲಾ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಹೋರಾಟ ಮಾಡುವ ಮೂಲಕ ಸರಕಾರದ ಗಮನ ಸೆಳೆದರು.
ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ಶೇಕಡ 90ರಿಂದ 93 ರಷ್ಟು ಅಂಕ ಪಡೆದಿದ್ದರೂ ವಿವಿಧ ಹಾಸ್ಟೆಲ್ ನಲ್ಲಿ ಪ್ರವೇಶ ಸಿಕ್ಕಿಲ್ಲ.
ಆದರೆ ಕೆಲವು ಅಧಿಕಾರಿಗಳು ಹಾಗೂ ವಾರ್ಡನ್ ದುಡ್ಡು ಪಡೆದು ಶೇ 55ರಷ್ಟು ಅಂಕ ಪಡೆದವರಿಗೆ ಸೌಕರ್ಯ ಕಲ್ಪಿಸಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ದೂರಿದರು.
ಈ ವೇಳೆ ಮಾತನಾಡಿದ ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಈ ಬಗ್ಗೆ ಇಲಾಖೆ ವಿಚಾರಣೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ನಡುವೆ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ದಾಖಲೆ ಲೋಕಾಯುಕ್ತಕ್ಕೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಲ್ಲದೆ, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಮಾದರಿಯಲ್ಲೇ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ
ವಸತಿ ಸೌಲಭ್ಯ ಒದಗಿಸಬೇಕು ಎಂದು ಬಸವರಾಜ ಕೊರವರ ಆಗ್ರಹಿಸಿದರು.
ಬಳಿಕ ಸಚಿವ ಶ್ರೀನಿವಾಸ ಕೋಟಾ ಪೂಜಾರಿ ಅವರಿಗೆ ಜಿಲ್ಲಾ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಜನಜಾಗೃತಿ ಸಂಘ ದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ,
ಸುರೇಶ್ ಕೋರಿ, ಶಿವಕುಮಾರ್ ದೇವರಮನಿ, ಪ್ರಮೋದ ದೊರೆ, ಮುದುಕಪ್ಪ ಕುಂಟೋಜಿ, ಲಾಲ್ ಸಾಬ, ನಾಗರಾಜ,
ಹೇಮಂತ, ಶಿವು ಅರಕೇರಿ,
ಮಂಜು ಗಡ್ಡೆನ್ನವರ, ವಿಕ್ರಮ ರಾಠೋಡ,
ವಿಜಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.