ಧಾರವಾಡ prajakiran.com : ಮುಧೋಳದ ರನ್ನ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ರಾಜ್ಯದ ಬಿಜೆಪಿ ಸರಕಾರದ ಪ್ರಯತ್ನವನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಖಂಡಿಸಿದ್ದಾರೆ.
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಖಾಸಗೀಕರಣ ಕಾರ್ಯ ಆಘಾತಕಾರಿ ವಿಷಯವಾಗಿದೆ. ಹಲವಾರು ವರ್ಷಗಳಿಂದ ಸಾವಿರಾರು ರೈತರು ಶ್ರಮವಹಿಸಿದ ಫಲವಾಗಿರುವ ರನ್ನ ಸಕ್ಕರೆ ಕಾರ್ಖಾನೆಯನ್ನು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಏಕಸ್ವಾಮ್ಯದ ಮಾಲೀಕರಿಗೆ ವಹಿಸಲು ಹೊರಟಿರುವ ನಡೆ ಸರಿಯಲ್ಲ. ಸಹಕಾರಿ ವಲಯದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಲು ತರಾತುರಿ ನಡೆಸಿರುವ ಸರಕಾರದ ನಿರ್ಣಯ ಖಂಡನೀಯ.
ರೈತರು ತಮ್ಮ ಸ್ವಾಭಿಮಾನದಿಂದ ಸ್ಥಾಪಿಸಿರುವ ಸಂಸ್ಥೆಯಿಂದಲೇ ಬೆಳೆದ ಕೆಲವರು, ಇದೀಗ ಕಾರ್ಖಾನೆಯ ಸರ್ವನಾಶಕ್ಕೆ ಕಾರಣರಾಗಿದ್ದಾರೆ. ಕಾರ್ಖಾನೆಯ ಹೆಸರು ಹೇಳಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದವರೇ ಸರಕಾರ ಮತ್ತು ಖಾಸಗಿಯವರಿಗೆ ಮಧ್ಯಸ್ಥಿಕೆ ವಹಿಸಿರುವುದು ದುರ್ದೈವದ ಸಂಗತಿ.
ಯಾವುದೇ ಕಾರಣಕ್ಕೂ ಸಹಕಾರಿ ಸಂಸ್ಥೆಯನ್ನು ಖಾಸಗಿಯವರಿಗೆ ಮಾರಲು ರೈತರು ಅವಕಾಶ ನೀಡುವ ಪ್ರಕ್ರಿಯೆಯಲ್ಲಿ ವಂಚನೆಗೊಳಗಾಗಬಾರದು. ಸರಕಾರದ ಖಾಸಗೀಕರಣದಂತಹ ಈ ರೈತ ದ್ರೋಹದ ವಿರುದ್ಧ ರೈತರು ಮತ್ತು ರೈತಪರ ಸಂಘಟನೆಗಳು ಧ್ವನಿ ಎತ್ತಬೇಕು.
ಈ ವಿಷಯ ಕುರಿತು ಚರ್ಚಿಸಲು ಬಾಗಲಕೋಟ ಜಿಲ್ಲಾಧಿಕಾರಿಗಳು ಆಗಸ್ಟ್ ೧೭ ರಂದು ಕರೆದಿರುವ ಕಾರ್ಖಾನೆಯ ಆಡಳಿತ ಮಂಡಳಿಯ ವರ್ಚುವಲ್ ಸಭೆಯನ್ನು ಕೂಡಲೇ ರದ್ದುಗೊಳಿಸಬೇಕು. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ತೀರ್ಮಾನದಿಂದ ಹಿಂದಕ್ಕೆ ಸರಿಯುವ ಮುಖಾಂತರ ರೈತರ ಹಿತರಕ್ಷಣೆಗೆ ಮುಂದಾಗಬೇಕು ಎಂದು ನೀರಲಕೇರಿ ಆಗ್ರಹಿಸಿದ್ದಾರೆ.