ಧಾರವಾಡ prajakiran.com : ಕಳೆದ ೩ ವರ್ಷಗಳಿಂದ ಪ್ಲಾಸ್ಟರ್ ಪ್ಯಾರೀಸ್ ಗಣಪತಿಗಳ ಮಾರಾಟ ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದರೂ ಸಹ ಈ ವರ್ಷ ಆ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಹುಬ್ಬಳ್ಳಿ ಧಾರವಾಡ ಮಹಾನಗರಗಳಲ್ಲಿ ಪಿಓಪಿ ಗಣಪತಿಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ.
ಇದರಿಂದ ಮಣ್ಣಿನಿಂದ ಮೂರ್ತಿ ಮಾಡುವ ಪರಿಸರ ಸ್ನೇಹಿ ಕಲಾವಿದರಿಗೆ ತಮ್ಮ ಮೂರ್ತಿ ಮಾರಾಟ ಮಾಡಲು ತುಂಬಾ ತೊಂದರೆಯಾಗಿದೆ ಹಾಗೂ ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸುವಂತಾಗಿದೆಎಂದು ಕಲಾವಿದರು ಗೋಳು ತೋಡಿಕೊಂಡಿದ್ದಾರೆ.
ಇದಲ್ಲದೆ, ಪಿ.ಓ.ಪಿ. ಗಣಪತಿಗಳು ನೀರಿನಲ್ಲಿ ಕರಗುವುದಿಲ್ಲ, ಇವುಗಳಿಗೆ ಬಳಸಿದ ರಾಸಾಯನಿಕ ಬಣ್ಣಗಳು ನೀರನ್ನು ಕಲುಷಿತಗೊಳಿಸುತ್ತವೆ. ಇವುಗಳ ಪ್ರತಿಷ್ಠಾನೆ ಮಾಡುವುದರಿಂದ ಪರಿಸರದ ಮೇಲೆ ಅಪಾರ ದುಷ್ಪರಿಣಾಮ ಬೀರಲಿದೆ.
ಈ ಗಣಪತಿಗಳ ಮಾರಾಟವನ್ನು ಈ ಕೂಡಲೇ ನಿಷೇಧಿಸಿ ಸಾಂಪ್ರದಾಯಿಕವಾಗಿ ಮಣ್ಣಿನ ಮೂರ್ತಿ ತಯಾರಿಸುವ ಪರಿಸರ ಸ್ನೇಹಿ ಕಲಾವಿದರ ಹಿತ ಕಾಪಾಡಬೇಕೆಂದು ಧಾರವಾಡ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಕಲಾವಿದ ಮಂಜುನಾಥ ಹಿರೇಮಠ, ನಮ್ಮ ಕೆರೆ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ, ಅಖಿಲ ಭಾರತ ವೀರಶೈವ ಮಹಾಸಭಾ ಕೋಶಾಧ್ಯಕ್ಷ ಬಿ. ಎಸ್. ಗೋಲಪ್ಪನವರ, ಕಲಾವಿದರಾದ ಶ್ರೀಧರ ಚಿತ್ರಗಾರ, ಪ್ರಕಾಶ ಬಡಿಗೇರ, ಕಿರಣ ಕೋಪಕರ, ಅಶೋಕ ಹುರಕಡ್ಲಿ, ವಿಜಯ ಪಾಟೀಲ, ರೋಹಿತ ಬೆಳಗಾಂವಕರ, ಮಂಜುನಾಥ ಬಡಿಗೇರ, ಗಣೇಶ ಚಿತ್ರಗಾರ, ದರ್ಶನ ಚಿತ್ರಗಾರ ಮುಂತಾದವರು ಒತ್ತಾಯಿಸಿದ್ದಾರೆ.