ಅಪಾರ ಪ್ರಮಾಣದ ಬೆಳೆ ಹಾನಿ, ರೈತರು ಕಂಗಾಲು
ಧಾರವಾಡ prajakiran.com : ಧಾರವಾಡ ಜಿಲ್ಲೆಯ ಬೆಣ್ಣೆ ಹಳ್ಳ ಮತ್ತೊಮ್ಮ ತನ್ನ ಕೋಪ, ತಾಪ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಿಲ್ಲೆಯ ನವಲಗುಂದ ತಾಲೂಕಿನ ಹಲವು ಹಳ್ಳಿ ಗಳುಅಕ್ಷರಶಃ ದಿಗ್ಬಂಧನಕ್ಕೊಳಗಾಗಿವೆ.
ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇದು 2007, 2009, 2019ರ ನೆನಪು ಮರುಕಳಿಸುವಂತೆ ಮಾಡತೊಡಗಿದೆ. ಬೆಣ್ಣೆ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದು ಗ್ರಾಮೀಣ ಜನತೆ ಮತ್ತೆ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದೆ.
ಅದರಲ್ಲೂ ನವಲಗುಂದ ತಾಲೂಕಿನ ಶಿರಕೊಳ, ಆಯಟ್ಟಿ, ಶಿರೂರ, ಗುಮ್ಮಗೋಳ ಹಾಗೂ ಹಣಸಿ, ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ನಗರ, ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜತೆಗಿನ ಸಂಪರ್ಕವನ್ನು ಕಡಿತಗೊಂಡಿವೆ.
ಇದರಿಂದ ಈ ಗ್ರಾಮಗಳು ನಡುಗಡ್ಡೆ ಯಂತಾಗಿದ್ದು, ಜನರು ಇನ್ನಿಲ್ಲದ ಪರಿತಾಪ ಪಡುವಂತಾಗಿದೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯಲು ಕೂಡ ಕಷ್ಟಸಾಧ್ಯದ ಸ್ಥಿತಿ ನಿರ್ಮಾಣವಾಗಿದೆ.
ಬೆಣ್ಣೆ ಹಳ್ಳದ ನೀರು ನುಗ್ಗಿದ್ದರಿಂದ ಜನರು ಕಂಗಾಲಾಗಿದ್ದು, ಕಷ್ಟ ಪಟ್ಟು ಬೆಳೆದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿನ ಬೆಳೆ ನೀರಿನಲ್ಲಿ ನಿಂತಿರುವುದು ರೈತರಿಗೆ ಕಣ್ಣೀರು ತರಿಸುತ್ತಿದೆ.
ಕೆಲವು ಹಳ್ಳಿಗಳಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರೆ ಇನ್ನೂ ಕೆಲ ಕಡೆ ಮನೆ ಹಿತ್ತಲಿನಲ್ಲಿದ್ದ ಮೇವು ನೀರಿನಲ್ಲಿ ಮುಳುಗಿ ಹೋದ ಪರಿಣಾಮ ಉಪಯೋಗಕ್ಕೆ ಬಾರದಂತಾಗಿದೆ.
ಕೃಷಿ ಉಪಕರಣಗಳು, ಕಟ್ಟಿಗೆ, ಮನೆ ನಿರ್ಮಾಣಕ್ಕೆ ಕೂಡಿಟ್ಟ ಮರದ ಕಾಂಡಗಳು ನೀರಿನಲ್ಲಿ ಹರಿದುಕೊಂಡು ಹೋಗಿವೆ. ಸಾಕಷ್ಟು ಲುಕ್ಸಾನು ಆಗಿದೆ ಎಂದು ಶಿರಕೋಳ ಗ್ರಾಮದ ರೈತ ಪರಮೇಶ್ವರ ಹೊಸಬಾಳ prajakiran.com ಗೆ ತಮ್ಮಗೋಳು ತೊಡಿಕೊಂಡಿದ್ದಾರೆ.