ಅಸಲಿಗೆ ಸಚಿವರಿಗೆ ಪುತ್ರನೇ ಇಲ್ಲ
ಶಿಕ್ಷಕರ ಗೋಳು ಕೇಳಿ ಶಿಕ್ಷಣ ಸಚಿವರೇ ಕಳವಳ
ಬೆಂಗಳೂರು prajakiran.com : ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್ ಮಾತ್ರ ಏಕೈಕ ದಾರಿ. ಆದರೂ ಕೆಲವು ಶಿಕ್ಷಕರು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದು, ಶಿಕ್ಷಕರನ್ನೇ ಯಾಮಾರಿಸಿದ್ದಾರೆ.
ಈ ಬಗ್ಗೆ ಗೋಳು ತೋಡಿಕೊಂಡಿರುವ ಇಬ್ಬರು ಶಿಕ್ಷಕರು ಸಚಿವರ ಪುತ್ರನ ಹೆಸರಿನಲ್ಲಿ ವಂಚನೆಗೆ ಒಳಗಾಗಿರುವುದಾಗಿ ಕಣ್ಣೀರಿಟ್ಟಿದ್ದಾರೆ.
ಅಲ್ಲದೆ, ಈಗಾಗಲೇ ವರ್ಷಗಳಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ವರ್ಗಾವಣೆಯೂ ಆಗದೆ ಕಂಗಲಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಹಾಗೂ ಹಾವೇರಿ ತಾಲೂಕಿನ ರಾಣೆಬೆನ್ನೂರ ತಾಲೂಕಿನ ಪ್ರೌಢಶಾಲೆ ಶಿಕ್ಷಕಿಯರು ಮೋಸ ಹೋಗಿದ್ದಾರೆ.
ದುರಂತದ ಸಂಗತಿಯೆಂದರೆ ಶಿಕ್ಷಕರೇ ಈ ಹಣ ವಸೂಲಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಸೇಡಂನಲ್ಲಿ ಶಿಕ್ಷಕರಾಗಿರುವ ಮಂಜುನಾಥ ಕಡ್ಲೆಗುಂದಿ ಹಾಗೂ ಅಶೋಕ ಕುಲಕರ್ಣಿ ಅವರ ಮೇಲೆ ಈ ಗಂಭೀರವಾದ ಆರೋಪ ಕೇಳಿಬಂದಿದೆ.
ವರ್ಗಾವಣೆಗೆ ಯತ್ನಿಸುವ ಶಿಕ್ಷಕರನ್ನು ಇವರೇ ಸಂಪರ್ಕಿಸಿ ಹಣ ಕೊಟ್ಟರೆ ವರ್ಗಾವಣೆ ಮಾಡಿಸುವುದಾಗಿ ಹೇಳಿ ಹಣ ಪಿಕಿ, ಆನಂತರ ಪೊನ್ ಗೂ ಸಿಗದೆ,ಹಣ ಮರಳಿಸುವುದಾಗಿ ಯಾಮಾರಿಸುತ್ತಾ ಕಾಲ ತಳ್ಳುತ್ತಾರೆ ಎಂದು ವಿವರಿಸಿದ್ದಾರೆ.
ಅಸಲಿಗೆ ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಪುತ್ರನೇ ಇಲ್ಲ. ಕೇವಲ ಒಬ್ಬ ಪುತ್ರಿ ಇದ್ದಾರೆ. ಅವರು ವೈದ್ಯರಾಗಿದ್ದಾರೆ. ಈ ಶಿಕ್ಷಕರ ಗೋಳು ಕೇಳಿ ಸ್ವತಃ ಶಿಕ್ಷಣ ಸಚಿವರೇ ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಕುರಿತು ಸ್ಪಷ್ಟನೆ ನೀಡಿದ್ದು. ಶಿಕ್ಷಣ ಇಲಾಖೆಯಲ್ಲಿ ನನ್ನ ಯಾವುದೇ ಸಂಬಂಧಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈ ದುರುಳರನ್ನುಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲಾಗುವುದು.
ಆದರೆ ಪಾರದರ್ಶಕ ವರ್ಗಾವಣೆ ನೀತಿಯ ನಂತರವೂ ಶಿಕ್ಷಕರು ವರ್ಗಾವಣೆ ಆಸೆಗೆ ಬಿದ್ದು ವಂಚನೆಗೆ ಒಳಗಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.