ಕೊಡಗು prajakiran.com : ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮಸ್ಥಾನವಾಗಿರುವ ತಲಕಾವೇರಿಯ ಸಮೀಪವಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರಿ ಭೂ ಕುಸಿತ ಸಂಭವಿಸಿದೆ.
ಇದರಿಂದಾಗಿ ಭಾಗಮಂಡಲದ ತಲಕಾವೇರಿ ದೇವಸ್ಥಾನದ ಅರ್ಚಕ ನಾರಾಯಣಾಚಾರ್ಯ ಹಾಗೂ ಅವರ ಪತ್ನಿ ಸೇರಿ ನಾಲ್ವರು ಮಣ್ಣಿನಡಿ ಸಿಲುಕಿರುವ ಮಾಹಿತಿಯಿದೆ.
ಬ್ರಹ್ಮಗಿರಿ ಬೆಟ್ಟದ ಮೂಲೆಯೊಂದು ಸ್ವಲ್ಪ ಭಾಗ ಕುಸಿತಗೊಂಡ ಪರಿಣಾಮ ಮನೆ ಸುಮಾರು 2 ಕಿಮೀ ದೂರ ಜಾರಿ ಹೋಗಿದೆ.
ಘಟನಾ ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ, ಆರೋಗ್ಯ, ಪೊಲೀಸ್ ಸಿಬ್ಬಂದಿ ತೆರಳುತ್ತಿದ್ದಾರೆ. ನಾನು ಕೂಡಅವರೊಂದಿಗೆ ತೆರಳುತ್ತಿದ್ದೇನೆ. ಮಧ್ಯಾಹ್ನದವರೆಗೆ ಮುಟ್ಟಬಹುದು ಎಂದು ತಲಕಾವೇರಿ ದೇಗುಲ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ.
ಭಾರೀ ಮಳೆ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕ ಹೊಂದಲಾಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಮಣ್ಣಿನಲ್ಲಿ ಒಟ್ಟು ನಾಲ್ಕು ಜನರು ಸಿಲುಕಿರುವ ಮಾಹಿತಿ ಇದೆ. ನಿನ್ನೆ ಸಂಜೆ ನಾರಾಯಣಾಚಾರ್ಯ ಪತ್ನಿ ಹಾಗೂ ಇಬ್ಬರು ಸಿಲುಕಿರುವ ಮಾಹಿತಿ ಇದೆ. ಮನೆ ಗೋಡೆ ಬಿರುಕು ಬಿಟ್ಟಿದೆ.
ಅಲ್ಲಿ ಇರಬೇಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ನಿನ್ನೇ ಇದ್ದಕ್ಕಿಂದ್ದ ಮನೆ ಬಿದ್ದಿದೆ. ನಾಲ್ಕು ಜನ ಕಣ್ಮರೆ ಆಗಿದ್ದಾರೆ. ಪತ್ತೆ ಕಾರ್ಯಾಚರಣೆ ಮುಂದುವರೆದಿದೆ. ನಾಳೆ ಸಂಜೆ ಗುಡ್ಡಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಇದಲ್ಲದೆ, ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಭಾಗಮಂಡಲದಲ್ಲಿ ನೀರು ತುಂಬಿ ಹರಿಯುತ್ತಿದೆ. ಕಳೆದ ವರ್ಷದ ಕಹಿ ಘಟನೆ ಮರೆಯುವ ಮುನ್ನವೇ ಈ ವರ್ಷವೂ ಆತಂಕ ತಂದಿದೆ.