ಧಾರವಾಡ prajakiran.com : ಕೊರೊನಾ ಸೋಂಕಿತನೊಬ್ಬ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ಧಾರವಾಡ ಆರೋಗ್ಯ ಇಲಾಖೆ ಮಾಹಿತಿ ನೀಡುವ ಮೂಲಕ ಮಹಾಯಡವಟ್ಟು ಮಾಡಿದೆ.
ಈ ಹಿಂದೆ ಧಾರವಾಡದ ಕೊಟ್ಟಣದ ಓಣಿ, ಹೆಬ್ಬಳ್ಳಿ ಗ್ರಾಮಗಳಲ್ಲಿ ಯಡವಟ್ಟು ಮಾಡಿಕೊಂಡ ನಂತರ ಇದೀಗ ಜೀವಂತ ಇರುವ ವ್ಯಕ್ತಿಯೇ ಸತ್ತನೆಂದು ಮಾಹಿತಿ ನೀಡಿ, ಆ ಮೇಲೆ ತಪ್ಪಾಗಿದೆ ಎಂದು ವಿವರಣೆ ನೀಡಿದೆ.
ಹೌದು ನಿನ್ನೆ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಪಿ-18708, 62 ವರ್ಷದ ಪುರುಷ ಸೋಂಕಿನಿಂದ ಅಸುನೀಗಿದ್ದಾನೆ ಎಂದು ಮಾಹಿತಿ ನೀಡಿತ್ತು. ಈ ವಿಷಯ ಗೊತ್ತಾದ ಆ ವ್ಯಕ್ತಿಯ ಮನೆಯವರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಈ ಸಂಬಂಧ ಸ್ಪಷ್ಟನೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ ಗಣೇಶನಗರ ನಿವಾಸಿಯಾಗಿರುವ ಪಿ-18708 ಅವರು ಮೃತಪಟ್ಟಿದ್ದಾರೆ ಎಂದು ಕಣ್ತಪ್ಪಿನಿಂದಾಗಿ ನಮೂದಾಗಿದೆ.
ಇದಕ್ಕಾಗಿ ಆರೋಗ್ಯ ಇಲಾಖೆಯು ವಿಷಾದ ವ್ಯಕ್ತಪಡಿಸಿದೆ. ಈ ವ್ಯಕ್ತಿ ಗುಣಮುಖರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದೆ.