ಧಾರವಾಡ prajakiran.com : ಅಮೆರಿಕಾ, ಕ್ಯಾಲಿಪೋರ್ನಿಯಾ, ಬಹರೇನ್ ಹಾಗೂ ಆಸ್ಟೇಲಿಯಾದಲ್ಲಿ ಕೋವಿಡ್ 19 ಉಲ್ಭಣಗೊಂಡ ಹಿನ್ನಲೆಯಲ್ಲಿ ಅಲ್ಲಿ ಮನೆಯಿಂದ ಯಾರು ಹೊರಬರುವಂತಿಲ್ಲ.
ದೇವಸ್ಥಾನಗಳಿಗೂ ತೆರಳುವಂತಿಲ್ಲ. ಹೀಗಾಗಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಧಾರವಾಡದಿಂದಲೇ ಆನ್ ಲೈನ್ ಗಣೇಶೋತ್ಸವಕ್ಕೆ ಸಜ್ಜಾಗಿದ್ದಾರೆ.
ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಕಣ್ಣೀರ ಕಥೆ ಹೇಳಿ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರಕರ್ನಾಟಕ ಮೂಲದ 40ಕ್ಕೂ ಅಧಿಕ ಕನ್ನಡಿಗರು ಒಂದಾಗಿ ಗ್ಲೋಬಲ್ ವರ್ಚುವಲ್ ಗಣೇಶೋತ್ಸವ ಆಚರಿಸಲು ಮುಂದಾಗಿದ್ದಾರೆ.
ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ ಅವರ ಮನೆಯ ಅಂಗಳದಲ್ಲಿಯೇ ಈ ಗಣೇಶ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಪೂಜೆ, ಪ್ರಾರ್ಥನೆ, ವಿಸರ್ಜನೆಗೊಳ್ಳಲಿದ್ದು, ಅವರು ಆನ್ ಲೈನ್ ನಲ್ಲಿಯೇ ದರ್ಶನ ಪಡೆಯಲಿದ್ದಾರೆ. ಪ್ರಸಾದ ಮಾತ್ರ ಇಲ್ಲಿ ನೆಲೆಸಿರುವ ಅವರ ಕುಟುಂಬದವರ ಕೈ ಸೇರಲಿದೆ.
ಇಂತಹ ವಿಭಿನ್ನ ಪ್ರಯತ್ನಕ್ಕೆ ಶುಭದಾ ಬೆನ್ನೂರ, ಶಿವು ವಿಭೂತಿ ಸೇರಿ ಹಲವು ಸಮಾನ ಮನಸ್ಕ ಗೆಳೆಯರು ಮುನ್ನುಡಿ ಬರೆದಿದ್ದಾರೆ.
ಇದು ಕಲಾವಿದ ಮಂಜುನಾಥ ಹಿರೇಮಠ ಅವರಿಗೆ ತುಸು ನೆಮ್ಮದಿ ತಂದಿದೆ. ಗಣೇಶನನ್ನೇ ನಂಬಿ ಬದುಕುತ್ತಿರುವ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ನೋವಿಗೆ ಪ್ರಜಾಕಿರಣ.ಕಾಮ್ ಕೂಡ ಧಾವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.