ಹಳಿಯಾಳ/ಕೊಪ್ಪಳ prajakiran.com : ನವೆಂಬರ್ ಎರಡರಂದು ಗಂಗಾವತಿಯಲ್ಲಿ ನಡೆಯುವ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠರನ್ನ ನಿನ್ನೆ ಗಂಗಾವತಿಯ ಬಾರ್ ಎಂಡ್ ರೆಸ್ಟೋರೆಂಟ್ ನಿಂದ ಸಿನಿಮೀಯ ರೀತಿಯಲ್ಲಿ ಅಪಹರಿಸಿದ್ದ ಬಿಜೆಪಿ ಕಾರ್ಯಕರ್ತರು ಹಳಿಯಾಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಗಂಗಾವತಿ ಠಾಣೆಯಲ್ಲಿ ಎಳು ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದ್ದು, ಗಂಗಾವತಿ ಪೊಲೀಸರ ಮಾಹಿತಿ ಮೇಲೆ ಹಳಿಯಾಳದ ಪೊಲೀಸರು ಆತನನ್ನು ಹಳಿಯಾಳದಲ್ಲಿ ವಸತಿ ಗೃಹಕ್ಕೆ ಕರೆದೊಯ್ಯುವ ವೇಳೆ ವಶಕ್ಕೆ ತೆಗೆದುಕೊಂಡರು.
ಈ ವೇಳೆ ಓರ್ವ ಬಿಜೆಪಿಯ ಕಾರ್ಯಕರ್ತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಇದೇ ವೇಳೆ ಹಳಿಯಾಳ ಪೊಲೀಸರಿಂದ ಪ್ರಕರಣ ಮುಚ್ಚುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದರು.
ಇನ್ನು ಹಳಿಯಾಳದ ಪೊಲೀಸರು ಅಪಹರಣಕಾರರನ್ನು ಹಿಡಿದರೂ ರಾಜೀಸಂಧಾನ ಮಾಡುವ ಪ್ರಯತ್ನದಲ್ಲಿದ್ದು ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಹಾಗೂ ಅಪಹರಣಕ್ಕೊಳಗಾದ ಹಿರೇಮಠ್ ಸಹೋದರ ದೂರಿದ್ದಾರೆ.
ಇನ್ನು ಈ ಕುರಿತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ರವರನ್ನು ಮಾಧ್ಯಮ ಸಂಪರ್ಕಿಸಿದ್ದು, ಇಂದು ಸಂಜೆ ಗಂಗಾವತಿ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಆದರೇ ಠಾಣೆಯಲ್ಲಿ ಪೊಲೀಸ್ ಡೈರಿಯಲ್ಲಿ ಮಾಹಿತಿ ದಾಖಲಿಸಿ ನಂತರ ಗಂಗಾವತಿ ಪೊಲೀಸರ ಸುಪರ್ಧಿಗೆ ನೀಡುವುದಾಗಿ ತಿಳಿಸಿದ್ದಾರೆ.