ಮಂಗಳೂರು prajakiran.com : ತುಳು ಹಾಗೂ ಕನ್ನಡ ನಟ ರೂಪೇಶ್ ಶೆಟ್ಟಿ ಹಾಗೂ ಅವರ ತಂಡ ಕೋವಿಡ್ ಲಾಕ್ ಡೌನ್ ನಿಂದಾಗಿ ಸಮಸ್ಯೆಯಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ವಿತರಿಸಿ ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ.
ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿಯೂ ಅನೇಕ ನಿರಾಶ್ರಿತರಿಗೆ ಆಹಾರ ಸರಬರಾಜಿನ ಮೂಲಕ ನೆರವಾಗಿದ್ದ ರೂಪೇಶ್ ಶೆಟ್ಟಿ ಹಾಗೂ ತಂಡ ಈ ಬಾರಿ ಸಂಕಷ್ಟದಲ್ಲಿರುವ ಎಲ್ಲ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ರೇಷನ್ಕಿಟ್ ಹಾಗೂ ತರಕಾರಿ ಕಿಟ್ ಗಳನ್ನ ಅವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
ಕಳೆದ ಒಂದೂವರೆ ತಿಂಗಳಿನಲ್ಲಿ ಈಗಾಗಲೇ ಕರಾವಳಿ ಕರ್ನಾಟಕದಾದ್ಯಂತ
ಸುಮಾರು ಐದು ಸಾವಿರಕ್ಕೂ ಮೀರಿ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದು ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೀಡಾಗಿದೆ.
ಈಗಾಗಲೇ ಕರ್ನಾಟಕದ ಬೇರೆ ಜಿಲ್ಲೆಯ ಹಲವು ಭಾಗಗಳಿಂದಲೂ ಸಹಾಯಕ್ಕಾಗಿ ಕರೆಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದಲ್ಲಿ ಅಲ್ಲೂ ಜನರಿಗೆ ನೆರವಾಗುವ ಇಂಗಿತ ವ್ಯಕ್ತ ಪಡಿಸಿರುವ ರೂಪೇಶ್ ಶೆಟ್ಟಿ ವೀಡಿಯೋ ಮೂಲಕ ಇತರರಿಗೂ ಈ ಸಂದರ್ಭದಲ್ಲಿ ತಮ್ಮ ಪರಿಸರದಲ್ಲಿದ್ದು ಸಂಕಷ್ಟ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ನೆರವಾಗುವಂತೆ ಕರೆ ನೀಡಿದ್ದಾರೆ.
ರೂಪೇಶ್ ಶೆಟ್ಟಿ ಅವರ ಜತೆಗೆ ಅನಿಲ್ ಶೆಟ್ಟಿ, ದೀಕ್ಷಿತ್ ಆಳ್ವ, ಮಂಜುನಾಥ್ ಅತ್ತಾವರ್, ಲವಿತ್ ಕೊಟ್ಟಾರಿ, ನಿತೇಶ್ ಕುಲಾಲ್, ವಜ್ರೇಶ್ ಸನಿಲ್, ಅನಿಶ್, ರಾಜ ಮಾಣಿ, ನಿಖಿಲ್ ಬೇಕಲ್ ಮೊದಲಾದವರೂ ಈ ಜನೋಪಯೋಗಿ ಕಾರ್ಯದಲ್ಲಿ ಜೊತೆಯಾಗಿದ್ದಾರೆ.
ಈ ಯುವತಂಡದ ಪ್ರಯತ್ನ ಸಮಾಜದ ಉಳಿದವರಿಗೂ ಆದರ್ಶಪ್ರಾಯವಾಗಿದೆ.