ನವದೆಹಲಿ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಎಫ್.ಐ.ಆರ್ ರದ್ದು ಕೋರಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅರ್ಜಿ ವಿಚಾರಣೆ (ಇಂದು) ಮಂಗಳವಾರ ನಡೆಯಲಿದೆ.
ಸುಪ್ರೀಂ ಕೋರ್ಟ್ ಗೆ ಕಳೆದ ತಿಂಗಳು ಅಂದರೆ ಮೇ 28ರಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು.
ಅದು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ಗೌರವಾನ್ವಿತ ನ್ಯಾಯಮೂರ್ತಿ ಗಳಾದ ಎ.ಎಂ.ಖಾನವಿಲಕರ, ದಿನೇಶ್ ಮಹೇಶ್ವರಿ, ಅನಿರುದ್ದ ಬೋಸ್ ಅವರ ಎದುರು ವಿಚಾರಣೆಗೆ ಬರಲಿದೆ.
ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯ, ಧಾರವಾಡ ಹೈಕೋರ್ಟ್, ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಬೆಂಗಳೂರು ಹೈಕೋರ್ಟ್ ತಿರಸ್ಕರಿಸಿದ್ದವು.
ಹೀಗಾಗಿ ಅವರು ಈ ಬಾರಿ ಸುಪ್ರೀಂಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದೆ ನೇರವಾಗಿ ಸಿಬಿಐ ದಾಖಲಿಸಿರುವ ಪ್ರಕರಣವನ್ನೇ ರದ್ದು ಕೋರಿದ್ದಾರೆ
ಸುಪ್ರೀಂಕೋರ್ಟ್ ಮುಂದೆ ವಿನಯ ಕುಲಕರ್ಣಿ ಪರ ವಕೀಲರ ವಾದ ಹಾಗೂ ಸಿಬಿಐ ಪರ ವಕೀಲರ ಪ್ರತಿವಾದ ತೀವ್ರ ಕುತೂಹಲ ಕೆರಳಿಸಿದೆ.
ಇದರ ಮೇಲೆ ಅವರ ಅರ್ಜಿ ವಿಚಾರಣೆಗೆ ಅಂಗೀಕಾರ ವಾಗಲಿದೆಯೇ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಕಳೆದ ವರ್ಷ ನವೆಂಬರ್ ೫ ರಂದು ರಾಕೇಶ ರಂಜನ್ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ವಿನಯ್ ಕುಲಕರ್ಣಿ ಯನ್ನು ಬಂಧಿಸಿದ್ದರು.
ಹೀಗಾಗಿ ಸದ್ಯ ವಿನಯ್ ಕುಲಕರ್ಣಿ
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.