ಧಾರವಾಡ prajakiran.com : ಮಹಾಮಾರಿ ಕೊರೋನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಪ್ರಮಾಣ ಹೆಚ್ಚುತ್ತಿದೆ.
ಕೊರೋನಾ ನಿಯಂತ್ರಣಕ್ಕೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ ಸತ್ತೂರ ಬಳಿಯ ಶ್ರೀ ಸತ್ಯ ಸಾಯಿ ಕಾಲೇಜ್ ಆಫ್ ಹೋಮಿಯೋಪಥಿಕ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯವಾಗಿ ಬಳಸಬೇಕೆಂದರು.
ಧಾರವಾಡ ಭಾಗದಲ್ಲಿ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತಿದೆ.
ಟ್ರಸ್ಟ್ ಅಡಿ ಬರುವ ಶ್ರೀ ಸತ್ಯಸಾಯಿ ಕಾಲೇಜ್ ಆಫ್ ಹೋಮಿಯೋಪಥಿಕ್ ಮೆಡಿಕಲ್ ಸೈನ್ಸ್ ಕಾಲೇಜ್ ಕೊರೋನಾ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ.
ಅಲ್ಲದೇ, ಟ್ರಸ್ಟ್ ನ ಕಾರ್ಯದರ್ಶಿ ಡಾ. ಶರಣಪ್ಪ ಕೊಟಗಿ ಅವರು ಕೊರೋನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಸಹಕರಿಸುತ್ತೀರುವ ಕಾರ್ಯ ಶ್ಲಾಘನೀಯ ಎಂದರು.
ಶಾಸಕರಾದ ಪ್ರಸಾದ್ ಅಬ್ಬಯ್ಯ ಮಾತನಾಡಿ, ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಜಿಲ್ಲೆಯಲ್ಲಿ ಬೆಡ್ ಸಿಗದೇ ಸೋಂಕಿತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಡಾ. ಶರಣಪ್ಪ ಕೊಟಗಿ ಅವರು ಕೋವಿಡ್ ಕೇರ್ ಪ್ರಾರಂಭಿಸಿದ್ದಾರೆ.
ಆದ್ದರಿಂದ ಕೋವಿಡ್ ಸೋಂಕಿತರು ಈ ಕೋವಿಡ್ ಕೇರ್ ಕೇಂದ್ರದ ಸದುಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಮಾಜಿ ಸಭಾಪತಿ
ಡಾ. ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನೀಲ್ ಕುಮಾರ ಪಾಟೀಲ, ಟ್ರಸ್ಟಿನ ಕಾರ್ಯದರ್ಶಿ ಡಾ. ಶರಣಪ್ಪ ಕೊಟಗಿ, ಮೃತ್ಯುಂಜಯ ಕೊಟಗಿ, ನಾಗರಾಜ ಕೊಟಗಿ, ಇಸ್ಮಾಯಿಲ್ ತಮಟಗಾರ,
ಡಾ. ಉಮೇಶ ಹಳ್ಳಿಕೇರಿ, ಡಾ. ವಿವೇಕ ಪಾಟೀಲ, ಡಾ. ಎನ್.ಎಸ್. ಜೋಶಿ, ಡಾ. ನಂದಿನಿ, ಡಾ. ಹರ್ಷವರ್ಧನ್ ಸೇರಿ ಹಲವರು ಗಣ್ಯರು ಪಾಲ್ಗೊಂಡಿದ್ದರು.
ಆಸಕ್ತರು ಕೋವಿಡ್ ಕೇರ್ ಕೇಂದ್ರ ಮೊ: ನಂ 919731921888 ಗೆ ಸಂಪರ್ಕಿಸಲು ಕೋರಿದೆ.