ಧಾರವಾಡ prajakiran.com : ಸೇವೆಯಿಂದ ವಜಾಗೊಂಡಿದ್ದ ಪೊಲೀಸ್ ಕಾನ್ಸಟೇಬಲ್ ಮನೆಯಲ್ಲಿ ಗಾಂಜಾ ಪತ್ತೆಯಾದ ಘಟನೆ ಧಾರವಾಡದಲ್ಲಿ ಸೋಮವಾರ ಸಂಜೆ ನಡೆದಿದೆ.
ಪೊಲೀಸ್ ಆಯುಕ್ತ ಆರ್. ದಿಲೀಪ, ಧಾರವಾಡ ಎಸಿಪಿ ಜಿ. ಅನುಷಾ ಅವರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದ ಪೊಲೀಸರ ಕಾರ್ಯಾಚರಣೆಯಿಂದಾಗಿ ಈ ದುಷ್ಕೃತ್ಯ ಬಯಲಾಗಿದೆ.
ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡಿದ್ದ ವಜಾಗೊಂಡ ಪೊಲೀಸ್ ಕಾನ್ಸಟೇಬಲ್ ಸಂಜು ಪಾಟೀಲ್ (30) ಬಂಧಿತ ಆರೋಪಿಯಾಗಿದ್ದಾನೆ.
ಈತ ಬೆಂಗಳೂರಿನ ಠಾಣೆಯೊಂದರಲ್ಲಿ ಕಾನ್ಸಟೇಬಲ್ ಆಗಿದ್ದ ಸಂಜು, ಮೂಲತಃ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕನದಾಳ ಗ್ರಾಮದ ನಿವಾಸಿಯಾಗಿದ್ದಾನೆ.
ಬೆಂಗಳೂರಿನ ಪ್ರಕರಣವೊಂದರಲ್ಲಿ ಸೇವೆಯಿಂದ ವಜಾಗೊಂಡ ಸಂಜು ಪಾಟೀಲ್ ಧಾರವಾಡದ ಮುರಘಾಮಠದ ಹತ್ತಿರ ಮನೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳುತ್ತಿದ್ದ ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಬಂಧಿತ ಸಂಜುನ ಮನೆಯಲ್ಲಿ ಶೋಧ ಮಾಡಿದಾಗ 283 ಗ್ರಾಂ ಗಾಂಜಾ, 1 ಮೊಬೈಲ್ ಸಿಕ್ಕಿದ್ದು, ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿತನಿಗೆ ಕರೋನಾ ಟೆಸ್ಟಿಂಗ್ ಮಾಡಿಸಿದಾಗ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆತನನ್ನು ಮುಂಜಾಗ್ರತ ಕ್ರಮವಾಗಿ ಗೋಪನಕೊಪ್ಪದ ಕ್ವಾರೈಂಟಿನ್ ಸೆಂಟರ್ ನಲ್ಲಿ ಇರಿಸಲಾಗಿದೆ.
ಈ ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ವಿವರಿಸಿದ್ದಾರೆ.