ಧಾರವಾಡ prajakiran.com : ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ರೌಡಿಸಂ, ಜೀವ ಬೆದರಿಕೆ, ಭೂ ಅತಿಕ್ರಮಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಹಾಗೂ ರೌಡಿಶೀಟರ್ ಫ್ರೂಟ್ ಇರ್ಫಾನ್ ಬಲ ಗೈ ಬಂಟನಾಗಿದ್ದ ಮುಕ್ತಂ ಸೊಗಲದ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಡಿಸಿಪಿ ಪಿ ಕೃಷ್ಣಕಾಂತ ಹಾಗೂ ಧಾರವಾಡ ಎಸಿಪಿ ಜಿ. ಅನುಷಾ, ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದ ಪೊಲೀಸ್ ತಂಡ ಸರಿಯಾಗಿ ಬೆಂಡೆತ್ತಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳುಗಳ ಹಿಂದೆಯೇ ದಾಖಲಾದ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುಕ್ತುಂ ಸೊಗಲದ ನನ್ನು ನಿನ್ನೇ ದಿನವೀಡಿ ತೀವ್ರ ವಿಚಾರಣೆ ನಡೆಸಿದರು.
ಅಲ್ಲದೆ, ಚೆನ್ನಾಗಿ ಬಿಸಿ ತಾಕಿಸಿದಲ್ಲದೆ, ಬರೋಬ್ಬರಿ ಡ್ರಿಲ್ ಮಾಡಿದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದೇ ವೇಳೆ ಆತನ ಮೇಲೆ 2016ರ ಮಾ. 21ರಿಂದ 2020ರ ಮಾ. 11ರ ಅವಧಿಯಲ್ಲಿ ದೂರುದಾರ ಅಜ್ಜಪ್ಪ ತಂದೆ ಗುರುಬಸಪ್ಪ ಗಂಗಣ್ಣವರ ಅಲಿಯಾಸ್ ಗಂಗಾಣಿ ಹಾಗೂ ಸಾಕ್ಷಿದಾರರಾದ ಭೀಮಪ್ಪ ತಂದೆ ಗುರುಬಸಪ್ಪ ಗಂಗಣ್ಣವರ ಅಲಿಯಾಸ್ ಗಂಗಾಣಿ, ಶಿವಲಿಂಗಪ್ಪ ತಂದೆ ಗುರುಬಸಪ್ಪ ಗಂಗಣ್ಣವರ ಅಲಿಯಾಸ್ ಗಂಗಾಣಿ ಕುಟುಂಬದ ಐದು ಎಕರೆ ಒಂದು ಗುಂಟೆ ಶೇತಕಿ ಜಮೀನು ಖರೀದಿ ಮಾಡಿ ಹಣ ನೀಡದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಮಾಡಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು.
ಮಾಳಾಪುರದಿಂದ ಎತ್ತಿನಗುಡ್ಡಕ್ಕೆ ತಗುಲಿರುವ 5 ಎಕರೆ ಒಂದು ಗುಂಟೆ ಎಕರೆ ಜಮೀನು ಖರೀದಿ ಮಾಡಿದ್ದ ಮುಕ್ತಂ ಸೊಗಲದ ಹಾಗೂ ಸಲೀಂ ಶೇಖಸನದಿ ಇವರು ಕೂಡಿಕೊಂಡು ಅತಿಕ್ರಮ ಪ್ರವೇಶ ಮಾಡಿ ಶೆಡ್ ನಿರ್ಮಾಣ ಮಾಡಿ ಕಬ್ಜಾ ಪಡೆದುಕೊಂಡಿದ್ದರು.
ಅಲ್ಲದೆ, ದೂರುದಾರರ ಆಸ್ತಿ ಖರೀದಿ ಮಾಡಿಕೊಳ್ಳದೆ, ಹಣವನ್ನು ಕೊಡದೆ,ಮೊಸ ಪಡಿಸಿದ್ದು, ಕೇಳಲು ಹೋದ ದೂರುದಾರರಿಗೆಹಾಗೂ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ.
ಇದರಿಂದ ನೊಂದ ಅಜ್ಜಪ್ಪ ತಂದೆ ಗುರುಬಸಪ್ಪ ಗಂಗಣ್ಣವರ ಅಲಿಯಾಸ್ ಗಂಗಾಣಿ ನೀಡಿದ ದೂರಿನ ಮೇಲೆ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು
ದೂರಿನಲ್ಲಿ ಇತನ ಮೇಲೆ 447, 420, 504, 506 ಹಾಗೂ ಸಹ ಕಲಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪೆಂಡಾರ್ ಗಲ್ಲಿ ನಿವಾಸಿ ಮುಕ್ತುಂ ಹುಸೇನ ದಿಲಾವರಸಾಬ ಸೊಗಲದ ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ.
ಪೊಲೀಸ್ ಆಯುಕ್ತ ಆರ್. ದಿಲೀಪ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಪಿ. ಕೃಷ್ಣಕಾಂತ, ಎಂ.ಬಿ. ಬಸರಗಿ, ಧಾರವಾಡ ಎಸಿಪಿ ಅನುಷಾ ಜಿ., ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ, ಪಿ ಎಸ್ ಐ ಎಸ್ ಎಂ. ಹುಣಸಿಕಟ್ಟಿ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸಿ ಆರೋಪಿ ಮುಕ್ತುಂ ಸೊಗಲದ ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಹೀಗಾಗಿ ಈ ಪ್ರಕರಣದಲ್ಲಿ ಕೊನೆಗೂ ರೌಡಿಶೀಟರ್ ಮುಕ್ತಂ ಸೊಗಲದ ಜೈಲು ಪಾಲಾಗಿದ್ದಾನೆ.
ರೌಡಿಶೀಟರ್ ಮುಕ್ತಂ ಸೊಗಲದ ಇದನ್ನೇ ದಂಧೆಯನ್ನಾಗಿಸಿಕೊಂಡಿದ್ದ. ಹಲವರ ಜಮೀನು ಬರೆದುಕೊಂಡು ಹಣ ನೀಡದೆ ವಂಚನೆ ಮಾಡಿರುವ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರಿಗೆ ಹಲವು ದೂರು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.