ಧಾರವಾಡ prajakiran.com : ಕೇಂದ್ರ ಹಾಗೂ ರಾಜ್ಯ ಸರಕಾರ ಕದ್ದು ಮುಚ್ಚಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದಿರುವನ್ನು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮೋದಿ ಜಮೀನ್ದಾರಿ ಪದ್ದತಿ ಎಂದು ಕಿಡಿ ಕಾರಿದ್ದಾರೆ.
ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ರೈತ ಹಿತರಕ್ಷಣಾ ಪರಿವಾರದಿಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಧರಣಿ ಯಲ್ಲಿ ಮಾತನಾಡಿದರು.
ಎಲ್ಲಕ್ಕಿಂತ ಹೆಷ್ಷಾಗಿ ದೇಶದ ಸಂಸ್ಕೃತಿ ಹಾಳು ಮಾಡಲಾಗುತ್ತಿದೆ. ಶಾಸಕರ ಮೈಯಲ್ಲಿ ರೈತಪರ ರಕ್ತ ಹರಿಯುತ್ತಿದ್ದರೆ ರೈತ ವಿರೋಧಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಹೊರಡಿಸಿರುವ ಸುಗ್ರಿವಾಜ್ಞೆಯನ್ನು ಸದನದಲ್ಲಿ ವಿರೋಧಿಸಲಿ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಸವಾಲು ಹಾಕಿದರು.
ರೈತರ ಉಳುಮೆ ಮಾಡುವ ಫಲವತ್ತಾದ ಭೂಮಿಯನ್ನು ಶ್ರೀಮಂತರ ಉಡಿಗೆ ಹಾಕುವ ಮೂಲಕ ರೈತವರ್ಗವನ್ನು ಹಾಳು ಮಾಡಲಾಗುತ್ತಿದೆ. ಜೊತೆಗೆ ದೇಶ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಗುಡುಗಿದರು.
ಈವರ್ಷ 70 ಸಾವಿರ ಕೋಟಿ ಮೌಲ್ಯದ ಫಾಮ್ ಎಣ್ಣೆ ತಂದು ಜನರಿಗೆ ತಿನ್ನಿಸಲಾಗುತ್ತಿದೆ. ಅದರಿಂದಲೇ ಹೃದಯಾಘಾತಗಳು ಹೆಚ್ಚಿವೆ ಎಂದು ದೂರಿದರು.
ರೈತರನ್ನು ಭಿಕ್ಷೆ ಎತ್ತುವಂತೆ ಸಾಹುಕಾರರ ಮನೆ ಮುಂದೆ ಕೈ ಯೊಡ್ಡಿ ನೀಲ್ಲುವಂತೆ ಮಾಡುವ ಭೂ ಸುಧಾರಣೆ ಕಾಯ್ದೆ ವಿರುದ್ದ ಎಲ್ಲರೂ ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದರೆ ರೈತನ ಮಕ್ಕಳು ಎಂದು ಮೊಸಳೆ ಕಣ್ಣೀರು ಸುರಿಸುವುದನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪಗೆ ಕುರ್ಚಿಯಿಂದ ಇಳಿಸುವ ಎಚ್ಚರಿಕೆ ನೀಡಿ ಈ ಕಾಯ್ದೆ ಜಾರಿಗೆ ತರಲಾಗಿದೆ. ಅವರಿಗೆ ನಿಜವಾದ ರೈತ ಕಾಳಜಿಯಿದ್ದರೆ ಕುರ್ಚಿ ಬಿಟ್ಟು ಬಂದು ರೈತರ ಪರ ನಿಲ್ಲಲಿ ಎಂದು ಸಲಹೆ ನೀಡಿದರು.
ಯಡಿಯೂರಪ್ಪತಮ್ಮನ್ನು ನಂಬಿರುವ ರೈತ ಸಮೂಹಕ್ಕೆ ಮೋಸ ವಾಗಲು ಬಿಡಬಾರದು. ಇಲ್ಲದಿದ್ದರೆ ರೈತರ ಶಾಪ ತಟ್ಟಲಿದೆ. ಈ ಬಗ್ಗೆ ಬರುವ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಅಖಂಡ ಕರ್ನಾಡಕ ರೈತ ಸಂಘದ ಉಪಾಧ್ಯಕ್ಷ ಸಿದ್ಧನಗೌಡ ಪಾಟೀಲ,ತೇರದಾಳ ಕ್ಷೇತ್ರದ ಮುಖಂಡ ನಾಗರಾಜ ಹೊಂಗಲ್, ನ್ಯಾಯವಾದಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ಉಡಿಕೇರಿ, ಗುರುರಾಜ ಹುಣಸಿಮರದ, ಶಂಕರ ಕಾಜಗಾರ, ರಾಜಶೇಖರ ಮೆಣಸಿನಕಾಯಿ, ಶಂಕರ ಅಂಬಲಿ, ಬಿ.ಸಿ.ಕೊಣ್ಣೂರ,ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ, ಬಸವರಾಜ ಮಲಕಾರಿ, ಶಾಂತಮ್ಮ ಗುಜ್ಜಳ, ಸ್ವಾತಿ ಮಾಳಗಿ, ಮಂಜುನಾಥ ಭೋವಿ, ಎಂ.ಎಫ್.ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.