ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ಸಾಕಷ್ಟು ಬೆಳೆಹಾನಿಯಾಗಿದೆ.
ಕಷ್ಟಪಟ್ಟು ರೈತ ಬೆಳೆದ ಬೆಳೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು, ಗದ್ದೆಗಳು ಕೆರೆಗಳಂತಾಗಿವೆ.
ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನಿಗೆ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.
ಇದರಿಂದಾಗಿ ಜಿಲ್ಲೆಯ ರೈತನ ಬದುಕುಮೂರಾಬಟ್ಟೆಯಾಗಿದ್ದು, ಶೇಂಗಾ, ಹೆಸರು, ಸೋಯಾಬಿನ್ ಸೇರಿದಂತೆ ಹಲವು ಬೆಳೆಗಳು ಹಾನಿಗೀಡಾಗಿವೆ.
ಮಳೆಯಿಂದ ಶೇಂಗಾ ಬೆಳೆ ಕಪ್ಪಾಗಿದ್ದು, ಮೊಳಕೆಯೊಡೆದು ಹಾಳಾಗಿ ಹೋಗಿದೆ.
ನೀರಲ್ಲಿಯೇ ಮೊಳಕೆಯೊಡೆಯುತ್ತಿರೋ ಸೋಯಾಬಿನ್ ಬೆಳೆಯಿಂದಾಗಿ ರೈತ ತಲೆ ಕೈ ಹೊತ್ತು ಕೂರುವಂತಾಗಿದೆ.
ಸರಿಯಾದ ಬೆಲೆ ಸಿಗದೇ ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದ ಮಳೆರಾಯನ ಆರ್ಭಟಕ್ಕೆ ರೈತರ ಬದುಕು ನಲುಗಿ ಹೋಗಿದೆ.
ಕಳೆದ ವರ್ಷ ಸುರಿದ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಧಾರವಾಡ ಜಿಲ್ಲೆಯ ರೈತರು ಈ ಬಾರಿಯೂಪರಿತಪಿಸುವಂತಾಗಿದೆ.
ಈ ವರ್ಷವು ವರುಣನ ಆರ್ಭಟಕ್ಕೆ ತತ್ತರಿಸಿ ಹೋದ ಅನ್ನದಾತನಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಆದಷ್ಟು ಬೇಗ ನೆರವಿಗೆ ಧಾವಿಸಬೇಕಿದೆ.