ಹಾಸನ prajakiran.com : ರಾಜ್ಯದಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರೋನಾ ಸೇನಾನಿಗಳಾದ ಪೊಲೀಸ್ , ಆರೋಗ್ಯ ಇಲಾಖೆ, ಪತ್ರಕರ್ತರಿಗೂ ಕಾಡುತ್ತಿದೆ.
ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಖಾಸಗಿ ಚಾನೆಲ್ ಗಳ ಪತ್ರಕರ್ತರಿಗೆ ಸೋಂಕು ಇರುವುದು ದೃಢವಾಗಿದೆ.
ಅವರು ಐದು ದಿನಗಳ ಹಿಂದೆ ತಪಾಸಣೆ ಮಾಡಿಸಿಕೊಂಡಿದ್ದರು. ಆದರೆ ಬುಧವಾರ ವರದಿ ಬಂದಿದ್ದು, ಅದರಲ್ಲಿ ಪಾಸಿಟಿವ್ ಇರುವುದು ಖಚಿತಗೊಂಡಿದೆ.
ಹೀಗಾಗಿ ಇಬ್ಬರನ್ನು ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ರೀತಿ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಹಲವು ಪತ್ರಕರ್ತರು ಕ್ವಾರಂಟಿನ್ ಗೆ ಒಳಪಟ್ಟಿದ್ದಾರೆ.
ಹಾಸನ ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಇಬ್ಬರು ಪತ್ರಕರ್ತರು ಹಲವು ಪತ್ರಿಕಾಗೋಷ್ಠಿ ಹಾಗೂ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ಇದರಿಂದಾಗಿ ಅವರ ಸಂಪರ್ಕದಿಂದಾಗಿ ಅನೇಕರು ಆತಂಕಗೊಂಡಿದ್ದು, ಎಲ್ಲಿ ತಮಗೂ ಕರೋನಾ ವಕ್ಕರಿಸುತ್ತಾ ಎಂಬ ಢವ ಢವ ಶುರುವಾಗಿದೆ.
ಶನಿವಾರ ಗಂಟಲು ದ್ರವ ತಪಾಸಣೆ ಮಾಡಿಸಿಕೊಂಡಿದ್ದ ಈ ಪತ್ರಕರ್ತರಿಗೆ ಐದು ದಿನ ತಡವಾಗಿ ಜಿಲ್ಲಾಡಳಿತ ವರದಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಏಕೆಂದರೆ ಇವರಿಬ್ಬರು ಪರೀಕ್ಷೆ ನಂತರವೂ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದರು. ಪತ್ರಕರ್ತರಜೊತೆಗೆ ಹೆಚ್ಚಾಗಿ ಜನಸಾಮಾನ್ಯರು, ಪೊಲೀಸರು, ರಾಜಕಾರಣಿಗಳು, ಅಧಿಕಾರಿಗಳು ಬೆರುವುದು ಸರ್ವೇಸಾಮಾನ್ಯ.
ಹೀಗಾಗಿ ಇವರಿಂದ ಇನ್ನೇಷ್ಟು ಜನರಿಗೆ ಕರೋನಾ ಹರಡುತ್ತದೆ ಎಂಬ ತಲೆ ನೋವು ಜಿಲ್ಲಾಡಳಿತಕ್ಕೆ ಎದುರಾಗಿದೆ.
ಸೋಂಕಿತರ ಒಡನಾಟವಿದ್ದ ಹಾಸನ ವಾರ್ತಾ ಇಲಾಖೆ ಕಚೇರಿ ಹಾಗೂ ಹಾಸನ ಪತ್ರಕರ್ತರ ಭವನಗಳನ್ನು ಮುಚ್ಚಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಅಲ್ಲದೆ, ಅವುಗಳನ್ನು ಸ್ಯಾನಿಟೈಸಿಂಗ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಿಗೆ ಕ್ವಾರಂಟೈನ್ ಗೆ ಸೂಚನೆ ನೀಡಿದೆ.
ಇನ್ನೂ ಹಾಸನದ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತೊಂದು ಸುತ್ತಿನ ಕೋವಿಡ್ 19 ಗಂಟಲು ದ್ರವ ಮಾದರಿ ಪರೀಕ್ಷೆಗೆ ಆರೋಗ್ಯ ಇಲಾಖೆ ನಿರ್ಧಾರ ಕೈಗೊಂಡಿದೆ.