ನವದೆಹಲಿ prajakiran.com : ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ (65) ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನ ಹೊಂದಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ಕೋವಿಡ್ ಪಾಸಿಟಿವ್ ಬಂದಿದೆ. ಆದರೆ ಯಾವುದೇ ರೋಗ ಲಕ್ಷಣಗಳು ಇಲ್ಲ ಎಂದು ಟ್ವೀಟ್ ಮಾಡಿದ್ದರು.
ಅವರನ್ನು ಅನಾರೋಗ್ಯದಿಂದ ದೆಹಲಿಯ ಎಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ.
1955ರ ಜೂನ್ 1ರಂದು ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಚನ್ನಬಸಪ್ಪ ಹಾಗೂ ಸೋವವ್ವ ಅಂಗಡಿ ದಂಪತಿಗಳ ಪುತ್ರರಾಗಿ ಜನಿಸಿದ್ದ ಸುರೇಶ ಅಂಗಡಿ ಅವರು ಬೆಳಗಾವಿಯ ಎಸ್ ಎಸ್ ಎಸ್ ಸಮಿತಿ ಕಾಲೇಜಿನಲ್ಲಿ ಪದವಿ, ರಾಜ ಲಕ್ಷಣಗೌಡ ಕಾನೂನು ಕಾಲೇಜ್ ನಲ್ಲಿ ಕಾನೂನು ಪದವಿ ಪೂರೈಸಿದ್ದರು.
ಪತ್ನಿ ಮಂಗಳ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬೀಗರಾಗಿದ್ದರು. ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.
2004, 2009, 2014, 2019 ರಲ್ಲಿ ಸತತವಾಗಿ ನಾಲ್ಕು ಬಾರಿ ಬೆಳಗಾವಿ ಸಂಸದರಾಗಿದ್ದ ಸುರೇಶಅಂಗಡಿ ಕೇಂದ್ರದಲ್ಲಿ ಮೊದಲ ಬಾರಿಗೆ ರಾಜ್ಯ ರೈಲ್ವೆ ಸಚಿವರಾಗಿದ್ದರು.
ಅಲ್ಲದೆ, ಬೆಳಗಾವಿ ಧಾರವಾಡ ರೈಲ್ವೆ ಮಾರ್ಗಕ್ಕೆ ಇತ್ತೀಚೆಗೆ ಸಮ್ಮತಿ ಸೂಚಿಸಿದ್ದ ಕೇಂದ್ರ ಸಚಿವರು ರಾಜ್ಯಕ್ಕೆ ಹತ್ತು ಹಲವು ಹೊಸ ರೈಲ್ವೆ ಯೋಜನೆಗಳನ್ನು ತಂದಿದ್ದ ಖ್ಯಾತಿ ಹೊಂದಿದ್ದ ಅವರು ಸರಳ ಸಜ್ಜನಿಕೆ ರಾಜಕಾರಣಿಯಾಗಿದ್ದರು.