ಧಾರವಾಡ prajakiran.com : ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳದ ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ತೇಲಿ ಹೋದ ಬಲ್ಲರವಾಡ ಗ್ರಾಮದ ಎರಡು ರೈತ ಕುಟುಂಬಗಳಿಗೆ ರಾಜ್ಯ ಸರಕಾರ ಹಾಗೂ ಧಾರವಾಡ ಜಿಲ್ಲಾಡಳಿತ ಒಂದು ತಿಂಗಳು ಕಳೇದರೂ ಈವರೆಗೆ ಪರಿಹಾರ ನೀಡಿಲ್ಲ.
ಘಟನೆ ನಡೆದು ಒಂದು ತಿಂಗಳು ಕಳೆದರೂ ಸಹ ಧಾರವಾಡ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.
ಅಲ್ಲದೇ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಪರ ಒಳಿತು ಬಯಸದೇ ಬೇಜವಾಬ್ದಾರಿ ತೋರುತ್ತಿರುವದು ಸರಿಯಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಆಗ್ರಹಿಸಿದ್ದಾರೆ.
ಅವರು ಸೋಮವಾರ ಸಂಜೆ ಬಲ್ಲರವಾಡ ಗ್ರಾಮಕ್ಕೆ ತೆರಳಿ ನೋಂದ ಕುಟುಂಬಗಳಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಬಸೂರು-ಬೆನ್ನೂರು ದಾರಿ ಮೂಲಕ ಬಲ್ಲರವಾಡ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗುವಾಗ ಬೆಣ್ಣಿ ಹಳ್ಳದ ಪ್ರವಾಹಕ್ಕೆ ಕೊಚ್ಚಿಹೋಗಿದ್ದರು.
ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ರೈತರಾದ ದೇವೇಂದ್ರಪ್ಪ ಮಾದರ ಹಾಗೂ ಶ್ರೀಕಾಂತ ಇನಾಮತಿ ತೇಲಿ ಹೋಗಿದ್ದರು.
ಹೀಗಾಗಿ ಇಬ್ಬರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಮನೆಗೆ ಆಸರೆ ಆಗಿದ್ದವರನ್ನು ಕಳೆದುಕೊಂಡ ಎರಡು ಕುಟುಂಬಗಳು ತೀವ್ರ ತೊಂದರೆಯಲ್ಲಿವೆ. ಅವರ ಕುಟುಂಬದ ನೆರವಿಗೆ ಜಿಲ್ಲಾಡಳಿತ ಕೂಡಲೇ ಧಾವಿಸಬೇಕು. ಇಲ್ಲದಿದ್ದರೆ ರೈತರ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.
ಇಬ್ಬರು ರೈತರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಸಿಗದೇ ಹೋದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು.
ಧಾರವಾಡ ಜಿಲ್ಲಾಡಳಿತಕ್ಕೆ ೨೪ ಗಂಟೆಯ ಗಡುವು ನೀಡಲಾಗುವುದು ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಗುಡುಗಿದ್ದಾರೆ.