ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ಅಧಿಕಾರಿಗಳ ತಂಡ ಹಾಲಿ ಬಿಜೆಪಿ ಶಾಸಕ-ಮಾಜಿ ಕಾಂಗ್ರೆಸ್ ಶಾಸಕರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಜಾಫರ್ ತಡಕೋಡ ವಿಚಾರಣೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಇವರು ಈ ಹಿಂದೆ ಮಾಜಿ ಸಚಿವರ ಆಪ್ತ ವಲಯದಲ್ಲಿದ್ದರು. ವಿಧಾನ ಸಭಾ ಚುನಾವಣೆ ನಂತರ ಬಿಜೆಪಿ ಶಾಸಕರ ಜೊತೆಗೆ ತುಂಬಾ ಒಡನಾಟ ಹೊಂದಿದ್ದಾರೆ.
ಇವರು ಮಾಜಿ ಸಚಿವರ, ಸಹೋದರನ ಜೊತೆಗೆ ಒಡನಾಟ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಭಾಸ್ಕರ ಕೌಡಿಕೇರಿ ಅವರನ್ನು ಕೂಡ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಇವರು 2016ರಲ್ಲಿ ಯೋಗೀಶಗೌಡ ಕುಟುಂಬದ ಸದಸ್ಯರು ನೀಡಿದ ಮರು ತನಿಖೆ ದೂರನ್ನು ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಈಗ ವಿಚಾರಣೆ ನಡೆಸಿರುವುದು ಪೊಲೀಸ್ ಇಲಾಖೆಗೆ ನಡುಕ ಹುಟ್ಟಿಸಿದೆ. ಇದಾದ ಬಳಿಕ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಹಾಗೂ ಅವರ ವಕೀಲರ ವಿಚಾರಣೆ ಸಿಬಿಐ ಅಧಿಕಾರಿಗಳ ತಂಡ ನಡೆಸಿದೆ.