ಧಾರವಾಡ prajakiran.com : ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣವು ಮೂಲಭೂತ ಕಲಿಕೆಯನ್ನು ಅವಲಂಬಿಸಿರುವುದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಮೂಲಭೂತ ಕಲಿಕೆ ಬಲಪಡಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗುವುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ನ ‘ರ್ಲಿ ಸ್ಪಾರ್ಕ ಕಾರ್ಯಕ್ರಮ’ದ ಜೊತೆಗೆ ಜಂಟಿಯಾಗಿ ಮಕ್ಕಳ ಮೂಲಭೂತ ಕಲಿಕೆ ಬಲಪಡಿಸಲು ಶಿಕ್ಷಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಸಮಾಲೋಚಿಸಲು ಶುಕ್ರವಾರ ತಮ್ಮ ಕಾರ್ಯಾಲಯದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯ ೨೦ ಸರಕಾರಿ ಪ್ರಾಥಮಿಕ ಶಾಲೆಗಳು, ೩೫ ಶಿಕ್ಷಕರು ಹಾಗೂ ಸುಮಾರು ೨ ಸಾವಿರದಷ್ಟು ವಿದ್ಯಾರ್ಥಿಗಳು ತರಬೇತಿಯ ಲಾಭವನ್ನು ಪಡೆದಿದ್ದರು.
ತರಬೇತಿ ಪಡೆದ ಶಾಲೆಗಳಲ್ಲಿ ಶಿಕ್ಷಕರ ಪಾಠದ ಪೂರ್ವ ಸಿದ್ಧತೆ, ಶಾಲೆಯ ಶೈಕ್ಷಣಿಕ ವಾತಾವರಣ, ವಿದ್ಯಾರ್ಥಿಗಳ ಚಟುವಟಿಕೆಯುಕ್ತ ಪಾಲ್ಗೊಳ್ಳುವಿಕೆ, ತರಗತಿಯಲ್ಲಿ ಮಕ್ಕಳ ಇಂಗ್ಲೀಷ್ ಭಾಷಾ ಸಾಮರ್ಥ್ಯದಲ್ಲಿ ಆಮೂಲಾಗ್ರ ಬದಲಾವಣೆ ಗುರುತಿಸಲಾಗಿದೆ ಎಂದರು.
ಮಕ್ಕಳ ಮೂಲಭೂತ ಕಲಿಕೆಯ ವಿಕಾಸದ ಅಂಶಗಳನ್ನು ಗಮನಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಮುಂದುವರೆಸಲು ಇಲಾಖೆಯಿಂದ ಬೇಕಾದ ಎಲ್ಲಾ ಸಹಾಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಸಾ.ಶಿ. ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಉಪನಿರ್ದೇಶಕ ಆರ್.ಎಸ್. ಮುಳ್ಳೂರ, ಜಿಲ್ಲೆಯ ಬಿಇಓಗಳಾದ ಶ್ರೀಶೈಲ ಕರಿಕಟ್ಟಿ, ಉಮೇಶ ಬಮ್ಮಕ್ಕನವರ, ಎ.ಎ.ಖಾಜಿ, ಉಮಾದೇವಿ ಬಸಾಪೂರ, ಡಯಟ್ ಹಿರಿಯ ಉಪನ್ಯಾಸಕ ವೈ.ಬಿ. ಬಾದವಾಡಗಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಗೀರ ಸೇರಿದಂತೆ ಹಲವಾರು ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.
ದೇಶಪಾಂಡೆ ಫೌಂಡೇಷನ್ನ ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಸ್ಮಿತಾ ದೇಶಪಾಂಡೆ ಅವರು ಕ್ಯಾಲಿಫೋರ್ನಿಯಾದ ಸ್ಯಾನ್ಫ್ಯಾನ್ಸಿಸ್ಕೋದಿಂದ ಅಂತರ್ಜಾಲದ ಮೂಲಕ ಸಭೆಯಲ್ಲಿ ಪಾಲ್ಗೊಂಡು ಅನೇಕ ವಿಚಾರಗಳನ್ನು ಹಂಚಿಕೊಂಡರು.
‘ರ್ಲಿ ಸ್ಪಾರ್ಕ ಕಾರ್ಯಕ್ರಮ’ದ ಪಿ.ಎನ್. ನಾಯಕ ಹಾಗೂ ನಿತ್ಯಾನಂದ ಚೆನ್ನೂರ ಇತರರು ಇದ್ದರು.