*ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳ ಚುನಾವಣೆಯಲ್ಲಿ ಅಕ್ರಮ*
*ತನಿಖೆ ಮಾಡಿ ಮರು ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ ಆ. 13 ರಂದು ನಡೆದ ಚುನಾವಣೆಯಲ್ಲಿ ಅನೇಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗುರವಾರ ಮರಾಠ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು.
ಸದಸ್ಯರ ಪಟ್ಟಿಯಲ್ಲಿ ಮರಣ ಹೊಂದಿದ ಹಾಗೂ ಹೊಸ ಸದಸ್ಯರ ಸದಸ್ಯತ್ವದಲ್ಲಿ ಅನೇಕ ಲೋಪದೋಷ ಕಂಡು ಬಂದಿವೆ.
ಇದರ ಬಗ್ಗೆ ಸಮಾಜದ ಪ್ರಮುಖರು ಹತ್ತು ಹಲವು ಬಾರಿ ಚುನಾವಣಾಧಿಕಾರಿಗಳಿಗೆ ಮತ್ತು ಚುನಾವಣಾ ಸಲಹಾ ಸಮಿತಿಯ ಪದಾಧಿಕಾರಿಗಳಿಗೆ ಲಿಖಿತ ತಕರಾರು ಸಲ್ಲಿಸಿದ್ದರೂ ಇಂದಿನ ವರೆಗೂ ಯಾವುದೇ ಉತ್ತರ ಕೊಟ್ಟಿಲ್ಲ ಎಂದು ಆರೋಪಿಸಿದರು.
ಚುನಾವಣೆ ಅಧಿಕಾರಿ, ಹಾಗೂ ಚುನಾವಣೆ ಸಲಹಾ ಸಮಿತಿಯ ಪದಾಧಿಕಾರಿಗಳು ಹಾಲಿ ಆಡಳಿತ ಮಂಡಳದ ಜೊತೆ, ಮಿಲಾಪಿಯಾಗಿ ಮತದಾನದ ವೇಳೆಯಲ್ಲಿ ಮರಣ ಹೊಂದಿದ ಸದಸ್ಯರ ಮತದಾನ ಮಾಡಿಸಿ ಹಾಗೂ ಖೋಟ್ಟಿ ಮತದಾನ ಮಾಡಿದ ಪರಿಣಾಮದಿಂದ ಮತ ಸಂಖ್ಯೆಗೂ ಮತ್ತು ಮತ ಪತ್ರಗಳ ಸಂಖ್ಯೆಗೂ ಹೊಂದಾಣಿಕೆಯಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಗಳು ಮತದಾನ ಪತ್ರಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಬಹಿರಂಗವಾಗಿ ಮತ ಪತ್ರಗಳನ್ನು ಇಟ್ಟುಕೊಂಡಿದ್ದು ಕಂಡು ಬಂದಿದೆ.
ಈ ಮತ ಪತ್ರಗಳನ್ನು ಚುನಾವಣೆ ಅಧಿಕಾರಿ ಯಾವುದೇ ರೀತಿಯಿಂದ ಸಿಲ್ ಮಾಡದೇ, ಬಹಿರಂಗವಾಗಿ ಇಟ್ಟಿರುತ್ತಾರೆ, ಇದು ಕಾನೂನು ಬಾಹಿರವಾಗಿದೆ.
ಅದೇ ರೀತಿ ಚುನಾವಣೆಗೆ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳು ಪಡೆದ ಮತಗಳ ಬಗ್ಗೆ ಘೋಷಣೆ ಮಾಡದೆ ಆ. 16 ರಂದು ಚುನಾವಣಾಧಿಕಾರಿಯು ಗೆದ್ದಂತಹ ಪ್ರತಿನಿಧಿಗೆ ಅಧಿಕೃತವಾಗಿ ಪ್ರಮಾಣ ಪತ್ರ ನೀಡ ಬೇಕಾಗಿತ್ತು.
ಆದರೆ ಹಾಲಿ ಆಡಳಿತ ಮಂಡಳಿಯು ಮುಚ್ಚಿದ ಬಾಗಿಲಿನಲ್ಲಿ ಪ್ರಮಾಣ ಪತ್ರಗಳನ್ನು ತಮ್ಮಷ್ಟಕ್ಕೆ ತಾವೇ ಹಂಚಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಚುನಾವಣೆ ಅಧಿಕಾರಿ ಹಾಗೂ ಚುನಾವಣೆ ಸಲಹಾ ಸಮಿತಿಯ ಪದಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಸಮ್ಮತ ಮರು ಚುನಾವಣೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾರಾಯಣ ಹುಬ್ಬಳ್ಳಿ, ವಿಜಯ ಭೋಸಲೆ, ನವೀನ ಕದಮ್, ಬಸವರಾಜ ಜಾಧವ, ರಾಜೇಶ ಜಾಧವ, ಮಂಜುನಾಥ ಜಾಧವ, ಕಿರಣ ಭೋಸಲೆ ಉಪಸ್ಥಿತರಿದ್ದರು.