ಧಾರವಾಡ prajakiran.com : ಕೊರೋನಾ ವೈರಸ್ (ಕೋವಿಡ್ -೧೯) ಸೃಷ್ಟಿಸಿರುವ ಈ ಸಂಕ್ರಮಣ ಸ್ಥಿತಿಯಲ್ಲಿ ಜನಸಾಮಾನ್ಯರ ಅದರಲ್ಲೂ ರೈತರ ಮತ್ತು ವ್ಯಾಪಾರಸ್ಥರ ಆರ್ಥಿಕ ಅಗತ್ಯಗಳನ್ನು ಗುರುತಿಸಿ, ಧಾರವಾಡ ಮೂಲದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ೭.೨೫ % ರಷ್ಟು ಕಡಿಮೆ ಬಡ್ಡಿ ದರದಲ್ಲಿ “ವಿಕಾಸ್ ಲಘು ಸುವರ್ಣ” ಎಂಬ ಹೆಸರಿನಲ್ಲಿ ವಿಶೇಷ ಚಿನ್ನದ ಸಾಲ ಯೋಜನೆಯನ್ನು ಶುಕ್ರವಾರದಂದು ಬಿಡುಗಡೆ ಮಾಡಿದೆ.
ನೂತನ ಬಂಗಾರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ, ಸದ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲವನ್ನು ಒದಗಿಸುವ ಉದ್ದೇಶದಿಂದ ಈ ಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಈ ಹೊಸ ಚಿನ್ನ ಸಾಲ ಯೋಜನೆಯಡಿ ಬ್ಯಾಂಕು ಮಾರುಕಟ್ಟೆ ಮೌಲ್ಯದ ೮೦% ಅಥವಾ ಪ್ರತಿ ಗ್ರಾಂಗೆ ಗರಿಷ್ಠ ೩೨೦೦ ರೂ. ನಿಗದಿಪಡಿಸಿದೆ.
೧೫ ಲಕ್ಷ ರೂ.ಗಳ ವರೆಗೆ ಗರಿಷ್ಠ ಸಾಲ ನೀಡಲಾಗುವುದು ಮತ್ತು ಗರಿಷ್ಠ ೬ ತಿಂಗಳ ಅವಧಿಯಲ್ಲಿ ಸಾಲವನ್ನು ಮರುಪಾವತಿಸಬೇಕಾಗುವುದು ಎಂದರು.
ಪ್ರಸ್ತುತ ಬ್ಯಾಂಕು ಚಿನ್ನದ ಸಾಲದ ಅಡಿಯಲ್ಲಿ ೪೧೦ ಕೋಟಿ ರೂ. ಹೊಂದಿದ್ದು ಈ ಯೋಜನೆ ೩೧/೧೨/೨೦೨೦ ರಂದು ಮುಕ್ತಾಯಗೊಳ್ಳುವುದರಿಂದ ಡಿಸೆಂಬರ್ ೩೧ ರ ಮೊದಲು ಕನಿಷ್ಠ ೧೦೦ ಕೋಟಿ ಸಾಲವನ್ನು ವಿತರಿಸುವ ಗುರಿ ಹೊದಲಾಗಿದೆ ಎಂದೂ ಗೋಪಿಕೃಷ್ಣ ಹೇಳಿದರು.
ಬ್ಯಾಂಕಿನ ಮಹಾಪ್ರಬಂಧಕರಾದ ಚಂದ್ರಶೇಖರ್ ಡಿ ಮೊರೊ , ಬಿ ಸಿ ರವಿಚಂದ್ರ, ಪಿ.ನಾಗೇಶ್ವರ ರಾವ್, ಮುಖ್ಯ ವ್ಯವಸ್ಥಾಪಕ ವಿ ವಿ ಯಾಜಿ ಮತ್ತಿತರರು ಉಪಸ್ಥಿತರಿದ್ದರು.