ಧಾರವಾಡ prajakiran.com : ಧಾರವಾಡ ಜಿಲ್ಲೆಯ ಶಿಕ್ಷಕರ ಕಡ್ಡಾಯ ವರ್ಗಾವಣೆ ವೇಳೆ ಗಲಾಟೆ, ಗದ್ದಲ ಉಂಟಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮುಜುಗರದ ಪ್ರಸಂಗ ಜರುಗಿದ ಘಟನೆ ಮಂಗಳವಾರ ನಡೆದಿದೆ.
ಧಾರವಾಡದ ಸರಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಕೇಂದ್ರ ದಲ್ಲಿ ಕೌನ್ಸಲಿಂಗ್ ವೇಳೆ ಮಾತಿನ ಚಕಮಕಿಯು ನಡೆಯಿತು.
ಒಟ್ಟು 120 ಜನ ಶಿಕ್ಷಕರಿಗೆ ಕೌನ್ಸ್ಲಿಂಗ್ ನಡೆಸಲಾಗುತ್ತಿತ್ತು. ಈ ಕೌನ್ಸ್ಲಿಂಗ್ ವೇಳೆ ಶಿಕ್ಷಕರು ತಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಕಡ್ಡಾಯ ವರ್ಗಾವಣೆ ಸರ್ಕಾರದ ನಿಯಮವಿದ್ದರೂ ಹೊಸ ಸ್ಥಳ ನಿಯುಕ್ತಿ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ.
ಮೊದಲು ಶಿಕ್ಷಕರನ್ನು ವರ್ಗಾವಣೆ ಮಾಡುತ್ತಾರೆ. ಆನಂತರ ಕೌನ್ಸ್ಲಿಂಗ್ ವೇಳೆ ಕಡಿಮೆ ಸೀಟುಗಳನ್ನು ತೋರಿಸುತ್ತಾರೆ ಎಂದು ಆರೋಪಿಸಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿ 25 ಹುದ್ದೆಗಳಿಗೆ ವರ್ಗಾವಣೆ ಮಾಡಬೇಕಿತ್ತು. ಈಗ ಕೇವಲ 15 ಜನ ಶಿಕ್ಷಕ ಹುದ್ದೆಗಳಿಗೆ ಮಾತ್ರ ಕೌನ್ಸ್ಲಿಂಗ್ ನಡೆಸಲಾಗುತ್ತಿದೆ ಎಂಬ ಕಾರಣಕ್ಕೆ ಗಲಾಟೆ ಉಂಟಾಯಿತು.
ಬೇರೆ ಕಡೆ ಸ್ಥಳ ನಿಯುಕ್ತಿಗೊಳಿಸದೇ ಮನೆಗೆ ಹೋಗಿ ಎನ್ನುತ್ತಿದ್ದಾರೆ. ಸೀನಿಯಾರಿಟಿ ಆಧಾರದ ಮೇಲೆ ಅಗತ್ಯ ಇರುವಷ್ಟು ಮಾತ್ರ ಶಿಕ್ಷಕರನ್ನು ಕೌನ್ಸ್ಲಿಂಗ್ಗೆ ಕರೆಯದೇ ಹೆಚ್ಚಿನ ಜನರನ್ನು ಕರೆಯಲಾಗಿದೆ ಎಂಬುದು ಶಿಕ್ಷಕರ ಆರೋಪ.
ಗಲಾಟೆ, ಗದ್ದಲ ಆರಂಭವಾಗುತ್ತಿದ್ದಂತೆ ಡಿಡಿಪಿಐ, ಬಿಇಓಗಳು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.