ಧಾರವಾಡ : ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಕುರಿತು ಧಾರವಾಡ ಜಿಲ್ಲೆಯ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ
ನಾಗರಾಜ ಕಿರಣಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಕಕ್ಷಿದಾರರ ಪರ ಹಿರಿಯ ವಕೀಲರಾದ ಎ. ಆರ್. ಪಾಟೀಲ ವಾದ ಮಂಡಿಸಿದ್ದರು.
ಈ ಕುರಿತು ಎಸ್.ಎಚ್. ಪಾಟೀಲ ಈ ಹಿಂದೆ ಲಿಂಗರಾಜ ಅಂಗಡಿ ಅವರ ನಾಮಪತ್ರ ತಿರಸ್ಕರಿಸುವಂತೆ ಹಲವು ಬಾರಿ ಕೇಂದ್ರ ಚುನಾವಣಾಧಿಕಾರಿ ಹಾಗೂ ಧಾರವಾಡ ಜಿಲ್ಲೆಯ ಚುನಾವಣೆ ಅಧಿಕಾರಿಗೆ ಪತ್ರ ಬರೆದಿದ್ದರು. ಆದರೆ, ಅದನ್ನು ಚುನಾವಣಾಧಿ ಪುರಸ್ಕರಿಸಿರಲಿಲ್ಲ.
ಹೀಗಾಗಿ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಅವರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.
ಜೊತೆಗೆ ಲಿಂಗರಾಜ ಅಂಗಡಿ ಅವರು ಕಸಾಪ ನಿಯಮಾವಳಿ ಗಾಳಿಗೆ ತೂರಿ ಎರಡು ಬಾರಿ ಅಧ್ಯಕ್ಷರಾಗಿದ್ದಲ್ಲದೆ, ಮೂರನೇ ಅವಧಿಗೆ ಸ್ಪರ್ಧಿಸಿದ್ದು ಕಸಾಪ ನಿಯಮಾವಳಿ ಸ್ಪಷ್ಟ ಉಲ್ಲಂಘನೆ ಆಗಿದೆ.
ಇದಲ್ಲದೆ ಕಸಾಪ ನಿಯಮಾವಳಿ ಪ್ರಕಾರ ಉಪವಿಭಾಗಾಧಿಕಾರಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಗಳನ್ನು ನೇಮಿಸಬೇಕು ಎಂದು ಇದೆ.
ಆದರೆ ಕಸಾಪ ಧಾರವಾಡ ಜಿಲ್ಲೆಯ ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಅವರನ್ನು ನೇಮಿಸಲಾಗಿದೆ. ಇದು ಕೂಡ ಸರಿಯಲ್ಲ ಎಂದು ಹೈಕೋರ್ಟ್ ಗಮನ ಸೆಳೆದಿದ್ದರು.
ಕಕ್ಷಿದಾರರ ವಾದ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರು ತಡೆಯಾಜ್ಞೆ ನೀಡಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಧಾರವಾಡ ಹೈಕೋರ್ಟ ಆದೇಶವನ್ನು
ಎಸ್.ಹೆಚ್. ಪಾಟೀಲ ಅವರು ಸ್ವಾಗತಿಸಿದ್ದಾರೆ.
ನಾವು ಹಲವು ಬಾರಿ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದರೂ ನಾಮಪತ್ರ ತಿರಸ್ಕಾರ ಆಗಿರಲಿಲ್ಲ. ಇದು ನಮ್ಮ ನಿರಂತರ ಹೋರಾಟಕ್ಕೆ ಜಯ ಸಂದಿದ್ದು, ಇದು ಸಂತಸ ತಂದಿದೆ. ಅಲ್ಲದೆ, ಸತ್ಯಾಂಶ ಹೊರಬಂದಂತಾಗಿದೆ ಎಂದರು.
ಹೈಕೋರ್ಟ್ ವಕೀಲರಾದ ಎ.ಆರ್. ಪಾಟೀಲ ಮಾತನಾಡಿ, ಹೈಕೋರ್ಟ್ ಧಾರವಾಡ ಜಿಲ್ಲೆಯ ಕಸಾಪ ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದು, ಕೇಂದ್ರ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಲಿಂಗರಾಜ ಅಂಗಡಿ ಅವರಿಗೆ ನೋಟಿಸ್ ನೀಡಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಉಪಸ್ಥಿತರಿದ್ದರು.