ಧಾರವಾಡ prajakiran.com : ಧಾರವಾಡದ ಹೊಸಯಲ್ಲಾಪುರದ ಬಳಿ ನಿನ್ನೆ ತಡರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಿಸಿದಂತೆ ಗಣೇಶೋತ್ಸವ ಕಮಿಟಿ ಸದಸ್ಯರು ಧಾರವಾಡದ ಶಹರ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ನಿನ್ನೆ ಗಣೇಶ ವಿಸರ್ಜನೆ ವೇಳೆ ಲಾಠಿ ಪ್ರಹಾರ ನಡೆಸಿ ಐವರನ್ನು ವಶಕ್ಕೆ ಪಡೆದಿರುವುದನ್ನು ತೀವ್ರವಾಗಿ ಖಂಡಿಸಿದರು.
20ಕ್ಕಿಂತ ಹೆಚ್ಚು ಜನ ಅಲ್ಲಿ ಸೇರಿರಲಿಲ್ಲ. ಆದರೂ ಪೊಲೀಸರು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿ ಪ್ರಹಾರ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು
ವಶಕ್ಕೆ ಪಡೆದ ಐವರನ್ನು ಕೂಡಲೇ ಹೊರಗಡೆ ಬಿಡಬೇಕು. ಲಾಠಿ ಚಾರ್ಜ್ ಮಾಡಿದ ಎಸಿಪಿ ಅನುಶಾ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಹೊಡೆಯಲು ನಿಮಗೆ ಅಧಿಕಾರ ಕೊಟ್ಟವರಾರು? ಜನಸಾಮಾನ್ಯರಿಗೂ ಒಂದೇ ಕಾನೂನು ಪೊಲೀಸರಿಗೂ ಒಂದೇ ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಅಲ್ಲಿ ನಾವು ಡಿಜೆ ಹಚ್ಚಿ ಕುಣಿಯುತ್ತಿರಲಿಲ್ಲ. ಸನ್ಮಾನ ಸಮಾರಂಭ ಮಾಡಿ ಶಾಂತ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿದ್ದೆವು.
ಆದರೂ ಕೆಲ ಪೊಲೀಸರು ಉದ್ದೇಶಪೂರ್ವಕವಾಗಿ ಈ ರೀತಿಯ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೆಳಕೆ, ಬಿಜೆಪಿ ಮುಖಂಡರಾದ ಸುನೀಲ ಮೊರೆ, ರಾಕೇಶ ನಾಜರೆ ,ಗಣೇಶ ಉತ್ಸವ ಮಂಡಳಿಯ ಅಜಯ ಕಲವಾರ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು