ಧಾರವಾಡದ ಎಸ್ಪಿ ಕೃಷ್ಣಕಾಂತ ಹೇಳಿಕೆ
ಧಾರವಾಡ prajakiran.com ಸೆ.18 : ಕುಂದಗೋಳ ತಾಲೂಕಿನ ಗುಡಗೇರಿ ಠಾಣೆ ಸರಹದ್ದಿನ ಬೂ. ಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಜಮೀನುಗಳಲ್ಲಿ ಮೆಣಸಿನಕಾಯಿ ಬೆಳೆಯ ಜೊತೆಗೆ ಗಾಂಜಾ ಗಿಡಗಳನ್ನು ತಮ್ಮ ಅಕ್ರಮ ಲಾಭಕ್ಕಾಗಿ ಬೆಳೆದ ಬಗ್ಗೆ ಮಾಹಿತಿ ತಿಳಿದು, ಪೊಲೀಸರು ಸೆಪ್ಟೆಂಬರ್ 16 ರಂದು ದಾಳಿ ಮಾಡಿ ಗಾಂಜಾ ಗಿಡ ಹಾಗೂ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಅವರು ಶನಿವಾರ ಎಸ್.ಪಿ.ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ ಉತ್ತರ ವಲಯದ ಐಜಿಪಿ ಎನ್.ಸತೀಶ ಕುಮಾರ ಮತ್ತು ಪೊಲೀಸ್ ಅಧಿಕ್ಷಕ. ಪಿ.ಕೃಷ್ಣಕಾಂತ ರವರ ಮಾರ್ಗದರ್ಶನದಲ್ಲಿ ಬೂ. ಕೊಪ್ಪ ಗ್ರಾಮದ ಜಮೀನಿನಲ್ಲಿ ಆರೋಪಿತನು ಅಕ್ರಮವಾಗಿ 31 ಕೆಜಿ ತೂಕದ ಒಟ್ಟು 32 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 1 ಲಕ್ಷ 25 ಸಾವಿರ ಮತ್ತು ಎರಡನೇ ಆರೋಪಿತನು 20 ಕೆಜಿ 160 ಗ್ರಾಂ. ತೂಕದ ಒಟ್ಟು 50 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 80 ಸಾವಿರ ಹಾಗೂ ಮೂರನೇ ಆರೋಪಿತನು 8.5 ಕೆಜಿ ತೂಕದ 17 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 25 ಸಾವಿರ ಹೀಗೆ ಒಟ್ಟು 59 ಕೆಜಿ 760 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು ಇವುಗಳ ಒಟ್ಟು ಅಂದಾಜು ಮೊತ್ತ ರೂ. 2 ಲಕ್ಷ 30 ಸಾವಿರ ಆಗುತ್ತದೆ ಎಂದು ಹೇಳಿದರು.
ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿಗಳನ್ನು ವಶಕ್ಕೆ ಪಡೆದು ಸೆಪ್ಟೆಂಬರ್ 16 ರಂದು ಜಿಲ್ಲಾ ಸತ್ರನ್ಯಾಯಾಲಯದಲ್ಲಿ ಹಾಜರು ಪಡೆಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಪೊಲೀಸ್ ಅಧಿಕ್ಷಕ ಪಿ.ಕೃಷ್ಣಕಾಂತ ವಿವರಿಸಿದರು.