ಧಾರವಾಡ prajakiran.com : ಹಿಂದೂ ಸಂಸ್ಕೃತಿ ನಾಶ ಮಾಡುವ ಮತ್ತು ವೀರಶೈವ-ಲಿಂಗಾಯತ ದೇವಸ್ಥಾನಗಳನ್ನು ತೆರವುಗೊಳಿಸುವ ಯತ್ನದಿಂದ ಬಿಜೆಪಿ ಸರಕಾರ ಹಿಂದೆ ಸರಿಯಬೇಕು.
ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಅವರು ಶನಿವಾರ ನಗರದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಧಿಕಾರಿಗಳು ನೆಲಸಮಗೊಳಿಸಿರುವ ನಂಜನಗೂಡಿನ ಪುರಾತನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ದೇವಾಲಯ ಕೆಡುವ ಕುರಿತು ಸುದ್ದಿಗಳು ಮಾಧ್ಯಮಗಳಲ್ಲಿ ಇದೀಗ ಹರಿದಾಡುತ್ತಿದೆ,
ರಾಜ್ಯದಲ್ಲಿ ನಡೆದಿರುವ ಇಂತಹ ವ್ಯವಸ್ಥೆಯನ್ನು ಖಂಡಿಸುತ್ತೆನೆ ಎಂದು ಹರಿಹಾಯ್ದರು.
ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಮೈಸೂರಿನ ನಿರಂಜನ ಮಠಕ್ಕೆ
೨೦೦ ವರ್ಷಗಳ ಇತಿಹಾಸವಿದೆ .
೧೮೯೨ ರಲ್ಲಿ ಸ್ವಾಮಿ ವಿವೇಕಾನಂದ ಅವರು ಈ ಮಠಕ್ಕೆ ಭೇಟಿ ನೀಡಿದ್ದರು. ಆಗ ಅವರಿಗೆ ನಿರಂಜನ ಮಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು
ಸದಾನಂದ ಗೌಡರು ಸಿಎಂ ಆಗಿದ್ದ ಅವಧಿಯಲ್ಲಿ ಆ ಮಠದ ಒಂದು ಎಕರೆ ಜಾಗವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ವೀವೇಕ ಸ್ಮಾರಕ ನಿರ್ಮಿಸಲು ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಕೊಂಡು ೫ ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.
ಸುಧೀರ್ಘ ಒಂದು ಇತಿಹಾಸ ಹೊಂದಿರುವ ನಿರಂಜನ ಮಠದ ಪರಂಪರೆಯನ್ನು ನಾಶ ಮಾಡಿ ಹೊಸದೊಂದು ಇತಿಹಾಸ ಸೃಷ್ಠಿ ಮಾಡಲೂ ಮುಂದಾಗಿದ್ದು ಖಂಡನೀಯ.
ಆಗ ಸದಾನಂದ ಗೌಡರ ಕಾಲದಲ್ಲಿ ನಿರಂಜನ ಮಠಕ್ಕೆ ಹಿನ್ನಡೆಯಾಗಿದೆ.
ನಾನು ಮೈಸೂರಿಗೆ ಹೋಗಿ ನಿರಂಜನ ಮಠದ ಸ್ವಾಮಿಜಿ ಭಕ್ತರ ಸಭೆ ಮಾಡಿದ್ದೆನೆ. ಪುರಾತನ ತತ್ವ ಇಲಾಖೆಗೆ ಸೇರಿದ ಇಲ್ಲವೋ ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಸರಕಾರದಲ್ಲಿ ಮೂರ್ಖ ಅಧಿಕಾರಿಗಳಿದ್ದಾರೆ, ಹಿಂದೂ ಧರ್ಮಕ್ಕೆ ಸರಕಾರ ಅನ್ಯಾಯ ಮಾಡಿದೆ.
ಇದೀಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ದೇವಸ್ಥಾನಗಳನ್ನು ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ನೆಲಸಮಗೊಳಿಸಲು ಸರಕಾರ ಹೊರಟಿದೆ. ನ್ಯಾಯಾಲಯದ ಆದೇಶ, ದೇವಸ್ಥಾನದ ಬಗ್ಗೆ ಅಗತ್ಯ ಅಧ್ಯಯನ, ಭಕ್ತರ ಭಾವನೆ ಮತ್ತಿತರ ಅಂಶಗಳನ್ನು ಪರಿಗಣಿಸದೇ ನೆಲಸಮಗೊಳಿಸುತ್ತಿರುವುದು ಇಡೀ ಸಮಾಜದ ಜನರಿಗೆ ನೋವುಂಟು ಮಾಡಿದೆ.
ಬಿಜೆಪಿ ಸರಕಾರದಲ್ಲಿ ಹಿಂದೂ ಧರ್ಮದ ಮತ್ತು ವೀರಶೈವ-ಲಿಂಗಾಯತ ಸಮಾಜದ ದೇವಾಲಯಗಳಿಗೆ ರಕ್ಷಣೆ ಇಲ್ಲದಾಗಿದೆ. ಸಮಾಜದ ಜನಪ್ರತಿನಿಧಿಗಳು ಕೂಡ ಗಮನಹರಿಸದಿರುವುದು ಸರಿಯಲ್ಲ ಎಂದರು.
ಈಗಿನ ಸಿಎಂ ಬೊಮ್ಮಾಯಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಸಿದಿದ್ದರೆ, ನಾವು ನಮ್ಮ ಮುಂದಿನ ನಡೆಯನ್ನು ಸಮಾಜದ ಸ್ವಾಮೀಜಿಗಳ ಜೊತೆ ಚರ್ಚಿಸಿ ಸ್ಪಷ್ಟಪಡಿಸುತ್ತೇವೆ.
ಇದೇ ವೇಳೆ ಸರಕಾರ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದರು.