ಧಾರವಾಡ prajakiran.com : ಧಾರವಾಡದ ಹೆಬ್ಬಳ್ಳಿ ಜಿಪಂ ಬಿಜೆಪಿ ಸದಸ್ಯ ಯೋಗಿಶಗೌಡ ಗೌಡರ ಕೊಲೆ ಪ್ರಕರಣವನ್ನು ಮೂರು ವರ್ಷಗಳ ನಂತರ ಬೇಧಿಸುವಲ್ಲಿ ಯಶಸ್ವಿಯಾದ ಸಿಬಿಐ ತನಿಖಾಧಿಕಾರಿಗೆ ರಾಷ್ಟ್ರಪತಿ ಪದಕ ಗೌರವ ಸಂದಿದೆ.
ಕೊಲೆ ನಡೆದು ಮೂರು ವರ್ಷಗಳ ಬಳಿಕ ಪ್ರಕರಣದ ಜಾಡು ಹಿಡಿದು ಹೊರಟ ಸಿಬಿಐ ತನಿಖಾಧಿಕಾರಿಗೆ ಒಂದು ವರ್ಷದ ವರೆಗೆ ಹತ್ತು ಹಲವು ಪ್ರಬಲ ಅನುಮಾನಗಳು, ಸಾಕ್ಷ್ಯಗಳು ದೊರೆತರೂ ಅದರ ಆಳ ಅಗಲ ಬಗೆದು ಒರೆಗೆ ಹಚ್ಚಿದಾಗ ಸಿಬಿಐ ಅಧಿಕಾರಿಗಳೇ ಸ್ವತಃ ಶಾಕ್ ಆಗಿದ್ದರು.
ಅಲ್ಲಿಯವರೆಗೆ ಸರಿ ಸುಮಾರು ಎನಿಲ್ಲವೆಂದರೂ ನೂರಾರು ಪೊಲೀಸರ, ಹಲವಾರು ರಾಜಕಾರಣಿಗಳ ಹಾಗೂ ರಾಡಿಶೀಟರ್ ಗಳ ವಿಚಾರಣೆ ನಡೆಸಿ, ಸತ್ಯ ಸಂಗ್ರಹಿಸಲು ಹಗಲು ರಾತ್ರಿ ಎನ್ನದೆ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರಿಂದ ಊರಿಗೆ ಅಲೆದಾಡಿ, ನಿಜವಾದ ಆರೋಪಿಗಳನ್ನ ಸೆರೆ ಹಿಡಿಯಲು ಶ್ರಮಿಸಿದ್ದ ಸಿಬಿಐ ಇನ್ಸ್ ಪೆಕ್ಟರ್ ರಾಕೇಶ್ ರಂಜನ್ ಅವರಿಗೆ ದೇಶದ ಅತ್ಯ ಉನ್ನತ ಪ್ರಶಸ್ತಿ ಯಾದ ರಾಷ್ಟ್ರಪತಿ ಪದಕ ಲಭಿಸಿದೆ.
ನಾಳೆ ಗಣರಾಜ್ಯೋತ್ಸವ ನಿಮಿತ್ತವಾಗಿ ಅದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಲಿದ್ದಾರೆ.
ಧಾರವಾಡ ಜಿಲ್ಲೆಯ ಜನತೆಯಷ್ಟೇ ಅಲ್ಲದೆ, ಇಡೀ ಕರ್ನಾಟಕದ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಈ ಪ್ರಕರಣದ ಬೆಳವಣಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದನ್ನು ಹಾಗೂ ನೈಜ ಆರೋಪಿಗಳು ಕಂಬಿ ಹಿಂದೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಬಿಐ ಇನ್ಸ್ಪೆಕ್ಟರ್ ರಾಕೇಶ್ ರಂಜನ್ ಅವರಿಗೆ ರಾಷ್ಟ್ರ ಪತಿ ಪದಕ ದೊರೆತಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಹೆಚ್. ಕೊರವರ, ಯೋಗಿಶಗೌಡ ಸಹೋದರ ಗುರುನಾಥ ಗೌಡ, ಪ್ರಜಾಕಿರಣ.ಕಾಮ್ ಪ್ರಧಾನ ಸಂಪಾದಕ ನಾಗರಾಜ ಕಿರಣಗಿ ಅಭಿನಂದಿಸಿದ್ದಾರೆ