ಧಾರವಾಡ prajakiran. com :
ಹು-ಧಾ ಮೇಯರ ಮತ್ತು ಉಪ ಮೇಯರ ಆಯ್ಕೆ ವಿಳಂಬ ಖಂಡಿಸಿ ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಅವರು, ಮಹಾನಗರ ಪಾಲಿಕೆ ಚುನಾವಣೆಯನ್ನು ರಾಜ್ಯದಲ್ಲಿನ ಬಿಜೆಪಿ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಮುಂದೂಡತ್ತ ಬಂದಿತು.
ಇದೀಗ ಚುನಾವಣೆ ಜರುಗಿ ಐದು ತಿಂಗಳು ಕಳೆಯುತ್ತ ಬಂದರೂ ನೂತನ ಮೇಯರ ಮತ್ತು ಉಪ ಮೇಯರ ಆಯ್ಕೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ. ಈ ಮೂಲಕ ಚುನಾಯಿತ ಪ್ರತಿನಿಧಿಗಳು ಮತ್ತು ಚುನಾಯಿಸಿದ ಮತದಾರರನ್ನು ಅವಮಾನಿಸಲಾಗುತ್ತಿದೆ.
ಜೊತೆಗೆ ಅಭಿವೃದ್ಧಿಗೂ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರದ ಇಂತಹ ಬೇಜವಾಬ್ದಾರಿಯನ್ನು ಕಾಂಗ್ರೆಸ್ ಖಂಡಿಸುತ್ತದೆ.
ಈ ನಿಟ್ಟಿನಲ್ಲಿ ಹೋರಾಟ ಮುಂದುವರೆಸಲಿದೆ ಎಂದ ನೀರಲಕೇರಿ, ಇಂದು ಜಗದೀಶ ಶೆಟ್ಟರ್ ಅವರನ್ನು ಮೇಯರ ಮತ್ತು ಅರವಿಂದ ಬೆಲ್ಲದ ಅವರನ್ನು ಉಪಮೇಯರ ಆಗಿ ಆಯ್ಕೆ ಮಾಡುವ ಮುಖಾಂತರ ಖಂಡಿಸಲಾಗುತ್ತಿದೆ ಎಂದರು.
ಪಾಲಿಕೆಯ ಆವರಣದಲ್ಲಿ ಜಗದೀಶ್ ಶೆಟ್ಟರ್ ಅವರು ಮಹಾಪೌರರಾಗಿ ಹಾಗೂ ಅರವಿಂದ ಬೆಲ್ಲದ ಅವರು ಉಪ ಮಹಾಪೌರರಾಗಿ ಪ್ರಮಾಣ ವಚನ ತೆಗಿದುಕೊಳ್ಳುವ ಅಣಕು ಪ್ರದರ್ಶನ ನಡೆಸಿದರು.
ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ, ಸ್ವಾತಿ ಮಾಳಗಿ, ಪಾಲಿಕೆ ಸದಸ್ಯರಾದ ರಾಜಶೇಖರ ಕಮತಿ, ಡಾ. ಮಯೂರ ಮೋರೆ, ಪ್ರಮುಖರಾದ ಸಂತೋಷ ನೀರಲಕಟ್ಟಿ, ಆನಂದ ಸಿಂಗನಾಥ ಇನ್ನಿತರರು ಭಾಗವಹಿಸಿದ್ದರು.