ಜನಾಕ್ರೋಶಕ್ಕೆ ಕಣ್ಣು ತೆರೆದ ಸರ್ಕಾರ :
ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆ ಹಿನ್ನೆಲೆಯಲ್ಲಿ ಆದೇಶ ಹಿಂದಕ್ಕೆ
ಬೆಂಗಳೂರು prajakiran. com : ರಾಜ್ಯ ಸರ್ಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡಬಾರದು ಎಂಬ ವಿವಾದಿತ ಆದೇಶವನ್ನು ಕೊನೆಗೂ ರಾಜ್ಯದ ಜನತೆಯ ಜನಾಕ್ರೋಶಕ್ಕೆ ಮಣಿದು ರಾತ್ರೋ ರಾತ್ರಿ ವಾಪಸ್ ಪಡೆದಿದೆ
ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಗೆ ಪಾಟಲಿಗೆ ತುತ್ತಾಗಿದ್ದ ಈ ಆದೇಶವನ್ನು ವಾಪಾಸ್ ಪಡೆಯುವ ಮೂಲಕ ಭ್ರಷ್ಟರ ಹಾಗೂ ಲಂಚಬಾಕರ, ಮೈಗಳ್ಳ ನೌಕರರ ನಿದ್ದೆಗೆಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಈ ಆದೇಶ ವಾಪಸ್ ಪಡೆಯಲಾಗಿದೆ.
ಕರ್ನಾಟಕ ರಾಜ್ಯ ನೌಕರರ ಸಂಘ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡದಂತೆ ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿತ್ತು.
ಈ ಆದೇಶವನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮಧ್ಯರಾತ್ರಿಯೇ ಆದೇಶವನ್ನು ಹಿಂಪಡೆಯಲಾಗಿದೆ.