ವರದಿ : ಪ್ರಶಾಂತ.ಎನ್.ಹೂಗಾರ
ಸವದತ್ತಿ prajakiran.com : ಯಲ್ಲಮ್ಮ ದೇವಸ್ಥಾನದಲ್ಲಿ ಫೆಬ್ರುವರಿ-27 ರಂದು ಜರುಗಬೇಕಿದ್ದ ಭಾರತ ಹುಣ್ಣಿಮೆ ಜಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಹೇಳಿದ್ದಾರೆ.
ನಾಡಿನ ಪ್ರಸಿದ್ಧ ಶಕ್ತಿಪೀಠಗಳಲ್ಲೊಂದಾದ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ದೇವಸ್ಥಾನಲ್ಲಿ ಭಾರತ ಹುಣ್ಣುಮೆ ಜಾತ್ರೆಗೆ ನೆರೆಯ ರಾಜ್ಯ ಹಾಗೂ ನೆರೆಯ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಮತ್ತೊಂದು ಮಾದರಿಯ ಹೊಸ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೆ ಯಲ್ಲಮ್ಮ ಹಾಗೂ ಜೋಗುಳಬಾವಿ ಸತ್ಯವ್ವ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದರು.
ಆದರೆ, ನಿರ್ಬಂಧದ ಮಧ್ಯೆಯೂ ಯಲ್ಲಮ್ಮನಗುಡ್ಡಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಕೊರೊನಾ ಹೆಚ್ಚಾಗಿ ಹರಡಬಹುದೆಂಬ ಉದ್ದೇಶದಿಂದ ಭಾರತ ಹುಣ್ಣುಮೆ ಜಾತ್ರೆಯನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೆ ನಾಡಿನ ಭಕ್ತರೆಲ್ಲರೂ ಸಹಕರಿಸಬೇಕು. ವಿಶೇಷವಾಗಿ ಜಾತ್ರೆಯ ದಿನದಂದು ಯಲ್ಲಮ್ಮ ದೇವಿಯನ್ನು ಮನೆಯಲ್ಲಿಯೇ ಆರಾಧಿಸುವಂತೆ ತಿಳಿಸಿದ್ದಾರೆ.