ಧಾರವಾಡ prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಈಗ ಮತ್ತೆ ಹೊಸ ತಿರುವು ಪಡೆದುಕೊಂಡಿದೆ.
ತಮ್ಮ ಮಗಳನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಈ ಹಿಂದೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು.
ಆದರೆ, ಅವರು ಈವರೆಗೆ ತಮಗೆ ತಮ್ಮ ಮಗಳನ್ನು ಹುಡುಕಿಕೊಟ್ಟಿಲ್ಲ ಎಂದು ಆರೋಪಿಸಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ಥ ಯುವತಿಯನ್ನು ಹುಡುಕಿಕೊಡುವಂತೆ ಆಕೆಯ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಸಿಡಿ ಪ್ರಕರಣ ಬೆಳಕಿಗೆ ಬಂದ ನಂತರ ಸಂತ್ರಸ್ಥ ಮಹಿಳೆ ಸಾಕಷ್ಟು ಸುದ್ದಿಯಲ್ಲಿದ್ದರು.ಜೊತೆಗೆ ಆಕೆಯನ್ನು ಎಸ್ ಐ ಟಿ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿ ಕೊಟ್ಟಿದ್ದರು.
ಅದಾದ ಬಳಿಕ ಕೂಡ ಮಗಳು ಪೋಷಕರ ಬಳಿ ಹೋಗಿರಲಿಲ್ಲ. ಅಜ್ಞಾತ ಸ್ಥಳದಿಂದ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು.
ತಮ್ಮ ಮಗಳು ಕಳೆದ ಕೆಲ ತಿಂಗಳಿಂದ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಧಾರವಾಡ ಹೈಕೋರ್ಟ್ ನ ವಿಭಾಗೀಯ ಪೀಠದ ಮುಂದೆ ಸಂತ್ರಸ್ಥ ಮಹಿಳೆಯ ತಂದೆ ಪ್ರಕಾಶ ಕಂಚೇರಿ ಎಂಬುವವರು ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸರ್ಕಾರಿ ವಕೀಲರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಳ್ಳುವುದಾಗಿ ತಿಳಿಸಿದ್ದರಿಂದ ವಿಚಾರಣೆಯನ್ನು ಮಧ್ಯಾಹ್ನದ ನಂತರ ನಡೆಸುವುದಾಗಿ ಮುಂದೂಡಿತು.