ಧಾರವಾಡ prajakiran.com :
ಅಂದಾಜು 370 ಕೆಜಿ ಶ್ರೀಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಂಡು ಅವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರು ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಧಾರವಾಡದ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಧಾರವಾಡದ ಶೀಗಿಗಟ್ಟಿ ತಾಂಡಾದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು ಕಡೆಗೆ ಹೊರಟಿದ್ದ ಟಾಟಾ 207 ಗೂಡ್ಸ್ ಹಾಗೂ ಶಿಫ್ಟ್ ವಾಹನದಲ್ಲಿ ಈ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಿಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಈ ವಾಹನಗಳನ್ನು ಸಿನೀಮಿಯ ರೀತಿಯಲ್ಲಿ ಬೆನ್ನತ್ತಿ ವಶಕ್ಕೆ ತೆಗೆದುಕೊಂಡರು.
ಇದರಲ್ಲಿ ಐವರು ಆರೋಪಿಗಳು, 370 ಕೆಜಿ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಹಾಗೂ ಅದನ್ನು ಸಾಗಿಸಲು ಬಳಸಿಕೊಂಡ ಎರಡು ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು
ಉಪ ಅರಣ್ಯ ಸಂರಕ್ಷಣಾಧಿಕಾರಿ
ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.
ಈ ಐವರು ಶ್ರೀಗಂಧ ಸಾಗಿಸುತ್ತಿದ್ದ ಖದೀಮರು ಮಧ್ಯವರ್ತಿಗಳಾಗಿದ್ದಾರೆ. ಇವರು ಧಾರವಾಡದ ವಿವಿಧ ಭಾಗಗಳಲ್ಲಿನ ಶ್ರಿಗಂಧವನ್ನು ಕಳ್ಳತನ ಮಾಡಿ 400-500 ಕೆಜಿ ಆದ ಮೇಲೆ ಒಮ್ಮೆಲೆ ಆ ಶ್ರೀಗಂಧದ ಕಟ್ಟಿಗೆಗಳನ್ನು ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು ಎಂದು ಅವರು ವಿವರಿಸಿದರು.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ಕಲೆ ಹಾಕಿ, ನಿನ್ನೆ ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ರಾಣೆಬೆನ್ನೂರುವರೆಗೂ ಬೆನ್ನತ್ತಿ ಕೊನೆಗೂ ಅವರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ನಮ್ಮ ಸಿಬ್ಬಂದಿ ಯಶಸ್ವಿ ಯಾಗಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಅಪಾರ ಪ್ರಮಾಣದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು
ರಾಯಭಾಗ ತಾಲೂಕಿನ ಕನದಾಳ ಗ್ರಾಮದ ಪರಸಪ್ಪ ಭಜಂತ್ರಿ, ಮಾರುತಿ ಭಜಂತ್ರಿ, ಕಲ್ಲಪ್ಪ ಶಿಂಧೆ, ಮಹಾದೇವ ಮಾಂಗ ಹಾಗೂ ರಾಜು ಭಜಂತ್ರಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು, ಕಳೆದ ಹಲವು ದಿನಗಳಿಂದ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಗಳನ್ನು ರವಾನೆ ಮಾಡುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು .
ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.
ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ಯಲ್ಲಾ ನಾಯಕ್ ಹಮಾಣಿ ಮತ್ತು ಅರಣ್ಯ ರಕ್ಷಕ ವಿಠ್ಠಲ ಜೋನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.