ಧಾರವಾಡ prajakiran.com : ಕೊರೊನಾ ನಿಯಂತ್ರಿಸಲು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಅಗತ್ಯವಾಗಿದೆ.
ಈ ಪ್ರಾಥಮಿಕ ನಿಯಮಗಳನ್ನು ಪಾಲಿಸದೇ ಹೊರಗಡೆ ಅನಗತ್ಯವಾಗಿ ತಿರುಗಾಡುವವರ ಮೇಲೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ವಾಹನಗಳ ಮೂಲಕ ಜಲಫಿರಂಗಿ ಸಿಂಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಿರುವ ಅವರು ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯನ್ನು ಅರಿತುಕೊಳ್ಳಬೇಕು.
ಜಿಲ್ಲೆಯಾದ್ಯಂತ ಜುಲೈ ೨೪ ರ ವರೆಗೆ ಲಾಕ್ಡೌನ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನೇಕ ಅಚ್ಚರಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.
ಕೊರೊನಾ ನಿಯಂತ್ರಣ ಎಲ್ಲರ ಹೊಣೆಯಾಗಿದೆ. ಈ ವೈರಾಣುವಿನ ವಿರುದ್ಧ ಹೋರಾಟದಲ್ಲಿ ನಾವೆಲ್ಲರೂ ಸೇನಾನಿಗಳಾಗಬೇಕಾಗಿದೆ.
ಜಿಲ್ಲಾಡಳಿತದ ನಿರ್ದೇಶನ ಉಲ್ಲಂಘಿಸಿ ಹೊರಗಡೆ ಅನಗತ್ಯವಾಗಿ ಸಂಚರಿಸಿದರೆ ಅಂತಹವರ ಮೇಲೆ ಜಲಫಿರಂಗಿ ಎರಚಲಾಗುವುದು.
ಇದು ಅಪಾಯಕಾರಿ ಅಲ್ಲವಾದರೂ ಇಂತಹ ಕ್ರಮಕ್ಕೆ ಜನರು ಅವಕಾಶ ನೀಡದ ರೀತಿಯಲ್ಲಿ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.