ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.
ಅದರಲ್ಲೂಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವಪ್ರತಿಷ್ಠಿತ ಟಾಟಾ ಮಾರ್ಕೋಪೋಲೊ ಕಂಪನಿಗೂ ಕೊರೋನಾ ಕಾಟ ಎದುರಾಗಿದೆ.
ಕಂಪನಿಯಲ್ಲಿ ಕೆಲಸ ನಿರ್ವಹಿಸುವ 10 ಕ್ಕಿಂತ ಅಧಿಕ ಜನರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಈ ಬಗ್ಗೆ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಂಪನಿಯ ಕೆಲಸಗಾರಿಗೆ ಕೊರೋನಾ ಬಂದಿದ್ದು, ಜಿಲ್ಲೆಯ ವಿವಿಧ ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡದ ಕುಮಾರೇಶ್ವರ ನಗರದ ಪಕ್ಕದಲ್ಲಿರುವ ಶಕ್ತಿ ನಗರದ ನಿವಾಸಿಯೊಬ್ಬರು ಅದೇ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಮಂಗಳವಾರ ಕರೋನಾ ಇರುವುದು ದೃಢವಾಗಿದೆ.
ಅವರಿಗೆ ಕರೋನಾ ಪಾಸಿಟಿವ್ ಇರುವ ಸಂದೇಶ ಬೆಳಗ್ಗೆಯೇ ಬಂದರೂ ಸಂಜೆಯವರೆಗೆ ಆರೋಗ್ಯ ಇಲಾಖೆ ಅಂಬುಲೆನ್ಸ್ ಕಳುಹಿಸಿ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ.
ಈ ಬಗ್ಗೆ ಮನೆ ಮಾಲೀಕರು ಆಗಿರುವ ರೈತ ಮುಖಂಡ ನಿಂಗನಗೌಡ ಪಾಟೀಲ ಹಲವು ಬಾರಿ ಕರೆ ಮಾಡಿದ ಬಳಿಕ ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ ಅವರನ್ನು ಕರೆದುಕೊಂಡು ಹೋಗಿದೆ ಎಂದು ಅವರು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದರು.
ಅಲ್ಲದೆ, ಕಂಪನಿ ಕೂಡ ಕರೋನಾ ಹರಡುತ್ತಿರುವ ಬಗ್ಗೆ ಮಾಹಿತಿ ನೀಡದಂತೆ ತಮ್ಮ ಕೆಲಸಗಾರರಿಗೆ ಒತ್ತಡ ಹೇರಿದೆ. ಇದರಿಂದಾಗಿ ಟಾಟಾ ಮಾರ್ಕೋಪೋಲೊ ಕಂಪನಿ ನೌಕರರಲ್ಲಿ ಆತಂಕ ಹೆಚ್ಚಿದೆ.
ಕೊರೋನಾ ವ್ಯಾಪಿಸಿದರೂ ಕಂಪನಿ ಸೀಲ್ ಡೌನ್ ಮಾಡದೆ ಉದ್ದಟತನ ತೋರಿಸುವುದು ಸರಿಯಲ್ಲ. ಇಲ್ಲದಿದ್ದರೆ ಸ್ಯಾನಿಟೇಶನ್ ಆದರೂ ಮಾಡಿಸಲಿ ಎಂದು ಅಳಲು ತೋಡಿಕೊಂಡಿದ್ದಾರೆ.
ಅಸೆಂಬ್ಲಿ, ಪೆನಲಿಂಗ್ , ಪೇಂಟ್ ಶಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲಸಗಾರರು ಆತಂಕಕ್ಕೆ ಸಿಲುಕಿದ್ದಾರೆ.
ಅದರಲ್ಲೂ ಅಸೆಂಬ್ಲಿ ಬಿ ಸೆಕ್ಷನ್ ನಲ್ಲಿ ಕೆಲಸ ಮಾಡುವ 7 ಜನ ಕೆಲಸಗಾರರಿಗೆ ಪಾಸಿಟಿವ್ ಇದ್ದರೆ, ಪೇಂಟ್ ಶಾಪ್ ನ ಇಬ್ಬರಿಗೆ ಹಾಗೂ ಪೆನಲಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 4 ಜನರಿಗೆ ಪಾಸಿಟಿವ್ ಇದೆ.
ಕೆಲಸಗಾರರಿಗೆ ಕಂಪನಿ ಹೆಸರು ಹೇಳಿದಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಂಪನಿ ಹೆಸರು ಹೇಳಿದರೆ ಕೆಲಸದಿಂದ ಕಿತ್ತು ಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಬೇಲೂರು ಕೈಗಾರಿಕಾ ಪ್ರದೇಶದ ಕೆಲವು ಪ್ರತಿಷ್ಠಿತ ಕಂಪನಿಗಳು ಸಂಬಳ ಕಡಿತ ಮಾಡಿದಲ್ಲದೆ, ಮಾಧ್ಯಮಗಳಿಗೆ ಮಾಹಿತಿ ಹೊದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದವು.
ಮಾಲೀಕರು ತಮ್ಮ ಆರ್ಥಿಕ ಸಂಕಷ್ಟ, ಉತ್ಪಾದನೆ ಕುಸಿತದ ನೆಪದಲ್ಲಿ ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಲೇ ಇವೆ. ಈ ಬಗ್ಗೆ ಯಾರೊಬ್ಬರು ಧ್ವನಿ ಎತ್ತದಿರುವುದು ನೋವಿನ ಸಂಗತಿಯಾಗಿದೆ.