ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಅಂಗಡಿ ಮುಂಗ್ಗಟುಗಳ, ತರಕಾರಿ, ಹೊಟೇಲ್ ಮತ್ತಿತರ ಯಾವುದೆ ವ್ಯಾಪಾರಿಗಳು ಮಾಸ್ಕ್ ಧರಿಸದೆ ತಮ್ಮ ಅಂಗಡಿಗಳಿಗೆ ಬರುವ ಗ್ರಾಹಕರೊಂದಿಗೆ ವ್ಯಾಪಾರ ಚಟುವಟಿಕೆ ನಡೆಸಲು ನಿರಾಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮನವಿ ಮಾಡಿದ್ದಾರೆ.
ಅದೇ ರೀತಿ ಮಾಸ್ಕ್ ಧರಿಸದ ವ್ಯಾಪಾರಿಗಳೊಂದಿಗೆ ಗ್ರಾಹಕರು ಕೂಡಾ ಯಾವುದೇ ವ್ಯವಹಾರ ಕೈಗೊಳ್ಳಬಾರದು. ಅಂತಹ ವ್ಯಕ್ತಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಿದ್ದಾರೆ.
ಕೊರೊನಾ ವೈರಾಣು ನಿಯಂತ್ರಣಕ್ಕೆ ಧಾರವಾಡ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಸರಕಾರದ ಪ್ರಯತ್ನಕ್ಕೆ ಸಾರ್ವಜನಿಕರು, ವ್ಯಾಪಾರಿಗಳ, ಸಹಕಾರವು ಅಗತ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ಕೊರೊನಾ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ನಾಗರಿಕರು, ಸಂಘ ಸಂಸ್ಥೆಗಳು, ಮಹಿಳೆಯರು, ಯುವಕರು ಜಾಗೃತಿ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದರು.
ಸ್ಯಾನಿಟೈಜರ್ ಬಳಕೆ, ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಅನಗತ್ಯವಾಗಿ ಹೊರಗೆ ಬರದಂತೆ ತಿಳುವಳಿಕೆ ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ತಡೆಯಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅವರು ತಿಳಿಸಿದ್ದಾರೆ.