ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಅತ್ತಿಕೊಳ್ಳ ಸಮೀಪದ ಎಲಿಗಾರ ಲೇ ಔಟ್ ನಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಂ. 5 ರಲ್ಲಿ ಶನಿವಾರ ಮಧ್ಯಾಹ್ನ ಕಳಪೆ ಗುಣಮಟ್ಟದ ಆಹಾರ ಫೂರೈಸಲಾಗಿದೆ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಈ ಕುರಿತು ಹಲವು ವಿದ್ಯಾರ್ಥಿಗಳು ಪ್ರಜಾಕಿರಣ.ಕಾಮ್ ಗೆ ಕರೆ ಮಾಡಿ ಮಾಹಿತಿಯನ್ನು ನೀಡಿದರು.
ಜೊತೆಗೆ ಹಾಸ್ಟೆಲ್ ನಲ್ಲಿ ಬಳಸುವ ಕಳಪೆ ಮಟ್ಟದ ಆಹಾರದ ಕುರಿತು ವೀಡಿಯೋ ಹಾಕಿದರು. ಅಲ್ಲದೆ, ಮಧ್ಯಾಹ್ನದ ಊಟವನ್ನು ಮಾಡದೆ ಆಧಿಕಾರಿಗಳಿಗೆ ಸರಿಯಾಗಿ ಬಿಸಿ ತಾಕಿಸಿದರು.
ಘಟನಾ ಸ್ಥಳಕ್ಕೆ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. ಕೊನೆಗೆ ಪ್ರಜಾಕಿರಣ.ಕಾಮ್ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಎಂ.ಬಿ. ಸಣ್ಣೇರಿಯನ್ನು ಸಂಪರ್ಕ ಮಾಡಿದಾಗ ವಸ್ತುಸ್ಥಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಹಾಸ್ಟೆಲ್ ನ ವಾರ್ಡನ್ ರಾಮಣ್ಣ ಕುಂಬಾರ ಈವರೆಗೆ ಸಕರಾತ್ಮಕವಾಗಿ ಸ್ಪಂದಿಸಿಲ್ಲ. ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಹಲವು ನೋಂದ ವಿದ್ಯಾರ್ಥಿಗಳು ದೂರಿದರು.
ಈ ಬಗ್ಗೆ ಪ್ರಜಾಕಿರಣ. ಕಾಮ್ ಸಮಾಜ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಅವರನ್ನು ಸಂಪರ್ಕಿಸಿದಾಗ ಅವ್ಯವಸ್ಥೆ ಸರಿಪಡಿಸಲು ಹಾಗೂ ಈ ಕುರಿತು ವರದಿ ನೀಡಲು ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ವಿವರಿಸಿದರು.