*ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಅವಾಂತರ ಬಟಾಬಯಲು ವರದಿ ಬಿಗ್ ಇಂಪಾಕ್ಟ್*
*ಹಾಸ್ಟೆಲ್ ವಾರ್ಡನ್ ಗೆ ಕಾರಣ ಕೇಳಿ ನೋಟಿಸ್*
*20 ವರ್ಷಗಳಿಂದ ಗಬ್ಬೇದ್ದು ನಾರುತ್ತಿದ್ದ ಹಾಸ್ಟೆಲ್*
*ಪ್ರಜಾಕಿರಣ ವರದಿ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ*
*ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ವಿದ್ಯಾರ್ಥಿಗಳಿಗೆ ಸರದಿ ಪ್ರಕಾರ ಸ್ವಚ್ಛತಾ ಕಾರ್ಯದಿಂದ ಮುಕ್ತಿ*
ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿಯ ಕಲ್ಯಾಣ ನಗರದಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅವ್ಯವಸ್ಥೆ ಆಗರವಾಗಿದ್ದನ್ನು ಪ್ರಜಾಕಿರಣ.ಕಾಮ್ ಬಟಾಬಯಲು ಮಾಡಿತ್ತು.
ಪ್ರಜಾಕಿರಣ.ಕಾಮ್ ವರದಿ ಪ್ರಕಟಿಸಿದ ಬಳಿಕ ಜಾಣಕುರುಡುವಹಿಸಿದ್ದ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಈ ವಸತಿ ನಿಲಯದಲ್ಲಿ ಸುಮಾರು
70 ಕ್ಕೂ ಅಧಿಕ ಬಾಲಕರಿಗೆ ವಾರ್ಡನ್ ಸರದಿ ಪ್ರಕಾರ ಸ್ವಚ್ಛತಾ ಕಾರ್ಯ ಮಾಡಿಸುತ್ತಿದ್ದರು.
ಜೊತೆಗೆ ಯಾವ ವಿದ್ಯಾರ್ಥಿಗಳು ಯಾವ ಕೆಲಸ ಮಾಡಬೇಕು ಎಂಬ ನಾಮಫಲಕ ಚೀಟಿಯಲ್ಲಿ ಬರೆದು ಗೋಡೆಗೆ ಅಂಟಿಸಲಾಗಿತ್ತು.
ಈ ವಿಷಯ ಕುರಿತು ಕಾರಣ ಕೇಳಿ ಹಾಸ್ಟೆಲ್ ವಾರ್ಡನ್ ಗೆ ನೋಟಿಸ್ ನೀಡಲಾಗಿದ್ದು, ತಾಲೂಕಿನ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮಗ್ರ ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ ಅವರು ಪ್ರಜಾಕಿರಣ.ಕಾಮ್ ಗೆ ವಿವರಿಸಿದರು.
ಮಕ್ಕಳಿಂದಲೇ ಪಾತ್ರೆ, ಟೇಬಲ್ ಸ್ವಚ್ಛತಾ ಕೆಲಸ, ಶೌಚಾಲಯ, ಬಾತ ರೂಮ ತೊಳೆಯುವುದು, ಕಸ ಗೂಡಿಸುವುದು ಸೇರಿದಂತೆ ಇತರೆ ಸ್ವಚ್ಛತಾ ಕಾರ್ಯ ಮಾಡಿಸಿದವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಶಿಸ್ತು ಕ್ರಮ ಜರುಗಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ. ಏಕೆಂದರೆ ನಮ್ಮ ಬಳಿ ಬಾಲಕರು ಕೆಲಸ ಮಾಡುತ್ತಿದ್ದ ದಾಖಲೆಗಳಿವೆ ಎಂದು ವಿದ್ಯಾರ್ಥಿ ಮುಖಂಡ ಸುರೇಶ ಕೋರಿ ಅವರು ಎಚ್ಚರಿಸಿದ್ದಾರೆ.
ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಎಂ.ಬಿ. ಸಣ್ಣೇರಿ ಹಾಗೂ ಜಿಲ್ಲಾ ಅಧಿಕಾರಿ ಅಲ್ಲಾಭಕ್ಷ ಜಾಣಕುರುಡುತನ ತೋರಿಸಿದರೆ, ಅವರ ವಿರುದ್ದ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಈಗಲಾದರೂ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಆದ ಪ್ರಮಾದ ಸರಿಪಡಿಸುತ್ತಾರಾ ಇಲ್ಲವೇ ಜಾಣಕುರುಡುತನ ತೋರಿಸುತ್ತಾರೆಯೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.