ಧಾರವಾಡ ಪ್ರಜಾಕಿರಣ.ಕಾಮ್ : 358 ಬಡಕುಟುಂಬಗಳ ಜೀವನ ಬೀದಿಗೆ ಬರಬಾರದೆಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ, ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ಅವರು ಮೂರು ದಿನಗಳಿಂದ ಒಂದು ಹನಿ ನೀರು ಸಹ ಕೂಡ ಕುಡಿಯದೆ ಧಾರವಾಡ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಯೇ ಅಮರಣಾಂತ ಉಪವಾಸ ಸತ್ಯಾಗ್ರಹ
ನಡೆಸುತ್ತಿರುವುದನ್ನು ಕಣ್ಣಾರೆ ಕಂಡ ಧಾರವಾಡದ ಅನೇಕ ಹಿರಿಯ ಜೀವಗಳು, ಯುವಮಿತ್ರರು, ನೌಕರರು, ಜಿಲ್ಲೆಯ ವಿವಿಧ ಪಕ್ಷದ ಮುಖಂಡರು ಆರೋಗ್ಯ ವಿಚಾರಿಸಿ
ಮಮ್ಮಲ ಮರಗಿದರು.
ನೀವು ಗಟ್ಟಿಯಾಗಿದ್ದರೆ ಇಂತಹ ನೂರಾರು ಹೋರಾಟ ಮಾಡಬಹುದು ಎಂದು ಹಿರಿಯ ವಕೀಲರಾದ ಅನ್ನದಾನಿ ಪುರದ, ನೀಲೇಂದ್ರ ಗುಂಡೆ, ಕೆ.ಎಚ್. ಪಾಟೀಲ, ಶ್ರೀಕಾಂತ್ ಕ್ಯಾತಪ್ಪನವರ, ಎಂ.ಎ. ಪಠಾಣ,
ಕರ್ನಾಟಕ ಥಿಂಕರ್ಸ್ ಫೋರಮ್ ಅಧ್ಯಕ್ಷ ಪಿ ಎಚ್ ನೀರಲಕೇರಿ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಧಾರವಾಡ ಜಿಲ್ಲೆ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಹಮೀದ್ ಕೊಪ್ಪದ, ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಮಹೇಶ್ ಶೆಟ್ಟಿ, ಉದ್ಯಮಿ ರಾಜಣ್ಣ ಹಜಾರೆ, ರೈತ ಮುಖಂಡ ಸಿದ್ದಣ್ಣ ಕಂಬಾರ, ಮಹಾನಗರ ಪಾಲಿಕೆ ಸದಸ್ಯರಾದ ಶಂಭು ಸಾಲಿಮನಿ, ದೀಪಾ ಸಂತೋಷ್ ನೀರಲಕಟ್ಟಿ, ಹಿರಿಯ ಪತ್ರಕರ್ತ ಪುಂಡಲೀಕ ಹಡಪದ, ಸಾಧನಾ ಸಂಸ್ಥೆಯ ಇಸಬೆಲ್ಲಾ ಝೇವಿಯರ್ ಸೇರಿದಂತೆ ದೊಡ್ಡನಾಯಕನಕೊಪ್ಪ, ಕುಮಾರೇಶ್ವರ ನಗರ, ಗುಲಗಂಜೀಕೊಪ್ಪ, ಹುಬ್ಬಳ್ಳಿ ಧಾರವಾಡ ಶಹರದ ಹಾಗೂ ಹೆಬ್ಬಳ್ಳಿ, ಅಮ್ಮಿನಬಾವಿ, ಮರೆವಾಡ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ಯುವಮಿತ್ರರು, ಗುರುಹಿರಿಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಆಗಮಿಸಿ ನಿಮ್ಮ ಜೊತೆ ನಾವಿದ್ದೇವೆ,ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ನಿಮ್ಮಂತ ಹೋರಾಟಗಾರರು ನಮಗೆ ಅತಿಮುಖ್ಯ ಎಂದರು.
ಇದೆ ವೇಳೆ ಜಲಮಂಡಳಿ ಹಂಗಾಮಿ ನೌಕರರು ನಮಗೆ ಕೆಲಸ ಸಿಗದಿದ್ದರೆ ಚಿಂತೆಯಿಲ್ಲ ನಿಮ್ಮ ಆರೋಗ್ಯ ನಮಗೆ ಅತೀ ಮುಖ್ಯ, ನೀವು ನಮ್ಮ ಜೊತೆಗಿದ್ದರೆ ನಮಗೆ ಆನೆಬಲ ಎಂದು ಕೈ ಮುಗಿದು ಪ್ರಾರ್ಥಿಸಿದರು.
ಅವರ ಭಾವನೆಗಳಿಗೆ ಸ್ಪಂದಿಸಿ ಗೌರವಿಸಿದ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ ಅವರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲ, ಎಲ್ಲರೂ ಒಗಟ್ಟಿನಿಂದ ನ್ಯಾಯಸಿಗುವವರೆಗೂ ಹೋರಾಡೋಣ ಎಂದರು.