ವಿಜಯಪುರ prajakiran.com : ಭೀಮಾತೀರದಲ್ಲಿ ಮತ್ತೆ ಸೋಮವಾರ ಗುಂಡಿನ ಸದ್ದು ಮೊಳಗಿದ್ದು, ಮಹಾದೇವ ಸಾಹುಕಾರ್ ಭೈರಗೊಂಡ ಸಂಚರಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಭೈರಗೊಂಡ ಅವರ ಸ್ಥಿತಿ ಗಂಭೀರವಾಗಿದೆ. ಅವರ ಹೊಟ್ಟೆ ಭಾಗದಲ್ಲಿ ಎರಡು ಗುಂಡು ತಗುಲಿದ್ದರೆ, ಇನ್ನೊಂದು ಗುಂಡು ಬೆನ್ನಿನ ಪಕ್ಕೆಲುಬಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಗುಂಡಿನ ದಾಳಿಗೆ ಭೈರಗೊಂಡ ಮಹಾದೇವ ಸಾಹುಕಾರ್ ಮ್ಯಾನೇಜರ್ ಬಾಬುರಾಮ್ ಮಾರುತಿ ಕಂಚನಾಳ (64) ಸಾವನ್ನಪ್ಪಿದ್ದಾರೆ ಎಂದು ವಿವರಿಸಿದ್ದಾರೆ.
ಅಲ್ಲದೆ, ವಾಹನ ಚಾಲಕ ಲಕ್ಷಣನಿಗೆ ಟಿಪ್ಪರ್ ವಾಹನಅಪಘಾತದಿಂದ ಕಾಲು ಮುರಿದಿದ್ದು, ಗನ್ ಮ್ಯಾನ್ ರಮೇಶನಿಗೆ ತಲೆಗೆ ಪೆಟ್ಟು ಬಿದ್ದಿದೆ.
ಇನ್ನುಳಿದ ಇಬ್ಬರು ಗನ್ ಮ್ಯಾನ್ ಗಳಾದ ಜಗಬೀರಸಿಂಗ್ ಹಾಗೂ ಹುಸೇನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳಿಗೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೆ, ಮಹಾದೇವ್ ಸಾಹುಕಾರ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಂಡಿದ್ದು, ವಿಜಯಪುರ ನಗರದಲ್ಲಿ ನಾಕಾಬಂದಿ ಮಾಡಿ, ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆಎಂದು ತಿಳಿಸಿದ್ದಾರೆ.
ಘಟನೆ ವಿವರ :
ವಿಜಯಪುರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಚಡಚಣ ಕಡೆಗೆ ಹೊರಟಾಗ ಕನ್ನಾಳ್ ಕ್ರಾಸ್ ಹತ್ತಿರ ಮಹಾದೇವ ಭೈರಗೊಂಡ ಕಾರಿಗೆ ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡಿದ್ದಾರೆ.
ಹೀಗೆ ಡಿಕ್ಕಿ ಹೊಡೆದು ಕಾರು ಅಡ್ಡಗಟ್ಟಿದ ತಕ್ಷಣ ಮೂವರು ಅಪರಿಚತರ ತಂಡ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಅಪರಿಚಿತರ ಗುಂಡಿನ ದಾಳಿಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿತ್ತು.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಚಡಚಣ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.