ಹುಬ್ಬಳ್ಳಿ prajakiran.com : ಧಾರವಾಡ ಶಹರ ಪೊಲೀಸ್ ಠಾಣೆಯ ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫ್ರೂಟ್ ಇರ್ಫಾನ್ ಗೆ ಗುಂಡು ಹಾರಿಸಿದ್ದು ಮುಂಬೈನ ಶಾರ್ಪ್ ಶೂಟರ್ ಗಳೇ ಎಂದು ಗೊತ್ತಾಗಿದ್ದು, ಅವರಿಗೆ ಮೈಸೂರು ಜೈಲಿನಲ್ಲಿರುವ ಭೂಗತ ಪಾತಕಿ ಬಚ್ಚಾಖಾನ್ ಸಹಚರರು ಪಿಸ್ತೂಲ್ ಪೂರೈಸಿದ್ದಾರೆ.
ಶಾರ್ಪ್ ಶೂಟರ್ ಗಳಿಗಾಗಿ ಹಾಗೂ ಅವರಿಗೆ ಸುಪಾರಿ ಕೊಟ್ಟವರ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದಾಗಿ ಬಂಧಿತರ ಸಂಖ್ಯೆ ಈಗ ಏಳಕ್ಕೇರಿದಂತಾಗಿದೆ. ಬಂಧಿತರನ್ನು ಮೈಸೂರಿನ ಶಿವರಾತ್ರೇಶ್ವರ ನಗರದ ಬನ್ನಿಮಂಟಪ ಲೇಔಟನ ಶಹಜಾನ ಕೆ. ಆಶ್ರಫ್. ಕೆ (24) ಹಾಗೂ ಮೈಸೂರು ಗಾಂಧಿನಗರದ ಸೈಯದ್ ಸೋಹೈಲ್ ಪೀರ ಸೈಯದ ಆಜ್ಮ ಪೀರ (22) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ, ತನಿಖೆ ಮುಂದುವರೆದಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ ತಿಳಿಸಿದ್ದಾರೆ.
ಅಲ್ಲದೆ,ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.