ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಅವಳಿ ನಗರದ ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆಗಳಲ್ಲಿ ಜು.೩೦ರಂದು ಗುರುವಾರದಿಂದ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಮಿಷನ್ ಮೋಡ್ದಲ್ಲಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಅವರು ಕೋವಿಡ್-೧೯ ನ್ನು ನಿಗ್ರಹಿಸುವುದಕ್ಕಾಗಿ ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಮುಖಾಂತರ ಸಾರ್ವಜನಿಕರಲ್ಲಿ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಆದರೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಇವುಗಳ ಪಾಲನೆ ಆಗದಿರುವುದು ಕಂಡು ಬರುತ್ತಿದೆ. ಆದ್ದರಿಂದ ನಾಳೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೊರೊನಾ ಸೋಂಕಿತರು ಹೆಚ್ಚು ಕಂಡು ಬರುವ ಮತ್ತು ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಮಿಷನ್ ಮೋಡ್ದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಆರಂಭದಲ್ಲಿ ಹುಬ್ಬಳ್ಳಿ ನಗರದ ದುರ್ಗದಬೈಲ್, ಕಸಬಾ ಪೇಟೆ , ಹಳೇಹುಬ್ಬಳ್ಳಿ , ಆನಂದನಗರ, ಹೊಸ ಆನಂದ ನಗರ, ಬಂಕಾಪುರ ಚೌಕ, ಜನತಾ ಬಜಾರ್ , ಗಣೇಶ್ ಪೇಟೆ , ಹರ್ಷಾ ಕಾಂಪ್ಲೆಕ್ಸ್, ಎಂಪಿಎಂಸಿ
ಧಾರವಾಡ ನಗರದ ಸುಭಾಷ ರಸ್ತೆ, ಟಿಕಾರೆ ರಸ್ತೆ , ಧಾರವಾಡ ಸುಪರ್ ಮಾರ್ಕೇಟ್ ಮತ್ತು ಧಾರವಾಡ ಎಪಿಎಂಸಿ ಪ್ರದೇಶಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುವುದು.
ಈ ಪ್ರದೇಶಗಳಿಗೆ ಆಗಮಿಸುವ ಸಾರ್ವಜನಿಕರನ್ನು ಮತ್ತು ಅಂಗಡಿ ಮಾಲೀಕರು, ಅಂಗಡಿಯ ಕೆಲಸ ನಿರ್ವಹಿಸುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪಪೊಲೀಸ್ ಆಯುಕ್ತರಾದ ಕೃಷ್ಣಕಾಂತ, ಆರ್.ಬಿ. ಬಸರಗಿ, ಮಹಾನಗರ ಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ, ಎಸಿಪಿ ಗಳಾದ ಅನುಷಾ ಜಿ., ಮಲ್ಲಪೂರ, ಹಾಗೂ ವಿವಿಧ ತಾಲೂಕಿನ ತಹಶೀಲ್ದಾರರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.