ಧಾರವಾಡ prajakiran.com : ಜಿಲ್ಲೆಯಾದ್ಯಂತ ಕೊರೋನಾ ರೋಗ ನಿಯಂತ್ರಣದ ಜಾಗೃತಿಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಆನ್ಲೈನ್ ಮೂಲಕ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಅತ್ಯುತ್ತಮ ಚಿತ್ರಕಲಾ ಕೃತಿಗಳನ್ನು ರಚಿಸಿದ ೧೦ ವಿದ್ಯಾರ್ಥಿಗಳ ಜೊತೆಗೆ ಜಿಲ್ಲಾಧಿಕಾರಿಗಳು ಉಪಹಾರ ಸೇವಿಸಿ ಅವರನ್ನು ಅಭಿನಂದಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಆಡಳಿತದ ಜೊತೆಗೂಡಿ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಯಾವುದೇ ಮಾಧ್ಯಮದಲ್ಲಿ ಎ-೪ ಸೈಜ್ ಡ್ರಾಯಿಂಗ್ ಹಾಳೆಯಲ್ಲಿ ಮನೆಯಿಂದಲೇ ಚಿತ್ರಬಿಡಿಸಿ ಅದನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ತಾಲೂಕಿನ ಶಿಕ್ಷಣ ಸಂಯೋಜಕರ ವಾಟ್ಸ್ ಆ್ಯಪ್ಗೆ ಕಳಿಸಬೇಕಾಗುತ್ತದೆ.
ಪ್ರತಿ ತಾಲೂಕಿನ ಕಲಾಕೃತಿಗಳನ್ನು ಕ್ರೋಡೀಕರಣ ಮಾಡಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಚಿತ್ರಕಲಾ ಕೃತಿಗಳಿಗೆ ಮೊದಲ ೧೦ ಬಹುಮಾನಗಳನ್ನು ಘೋಷಿಸಲಾಗುವುದು.
ವಾತಾವರಣ ನಿರ್ಮಾಣ : ಈಗಾಗಲೇ ಕೊರೋನಾ ನಿಯಂತ್ರಣದ ಜಾಗೃತಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ವೈಯಕ್ತಿಕವಾಗಿ ಶುಚಿತ್ವಕ್ಕೆ ಆದ್ಯತೆ ನೀಡುವುದು.
ಕೈಗಳನ್ನು ಆಗಿಂದಾಗ್ಗೆ ಸ್ಯಾನಿಟೈಜರ್ ಬಳಸಿ ಸ್ವಚ್ಛಗೊಳಿಸುವುದು, ಸಾರ್ವಜನಿಕ ಬದುಕಿನ ಜನಜೀವನದ ಸಂದರ್ಭದಲ್ಲಿ ಕೋವಿಡ್-೧೯ ಸೋಂಕು ತಗಲಬಹುದಾದ ಕ್ಷಣಗಳನ್ನು ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ತೀವ್ರ ಮುಂಜಾಗ್ರತೆ ವಹಿಸುವುದೂ ಸೇರಿದಂತೆ ವಿಭಿನ್ನ ನೆಲೆಗಳ ಮೂಲಕ ಕೊರೋನಾ ರೋಗ ನಿಯಂತ್ರಣವನ್ನು ಸಾಧಿಸಬಹುದಾಗಿದೆ.
ಈ ಎಲ್ಲ ಪ್ರಮುಖ ಸಂಗತಿಗಳನ್ನು ಆಧರಿಸಿ ಕೋವಿಡ್-೧೯ ನಿಯಂತ್ರಣದ ಜಾಗೃತಿ ಮೂಡಿಸಲು ಈ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ನಿಟ್ಟಿನಲ್ಲಿ ಎಲ್ಲೆಡೆ ಕೊರೋನಾ ನಿಯಂತ್ರಣದ ಬಗ್ಗೆ ಮನೆಮನೆಯಲ್ಲಿ ವಾತಾವರಣ ನಿರ್ಮಾಣ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
೧ ರಿಂದ ೫ನೇ ತರಗತಿ ಮಕ್ಕಳ ವಿಭಾಗ ಹಾಗೂ ೬ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳ ಮತ್ತೊಂದು ವಿಭಾಗ ರಚಿಸಲಾಗಿದೆ.
ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಕಲಾಕೃತಿಯೊಂದಿಗೆ ಪೂರ್ಣ ಹೆಸರು, ತಂದೆಯ ಹೆಸರು, ತರಗತಿ, ಶಾಲೆಯ ಹೆಸರು, ಗ್ರಾಮ/ಪಟ್ಟಣ, ತಾಲೂಕು ಹಾಗೂ ಸಂಪರ್ಕದ ಮೊಬೈಲ್ ನಂಬರ್ ಒಳಗೊಂಡು ಎಲ್ಲ ವಿವರಗಳನ್ನು ಒದಗಿಸಬೇಕು.
ಪ್ರತೀ ತಾಲೂಕಿನ ಶಿಕ್ಷಣ ಸಂಯೋಜಕರ ವಾಟ್ಸ್ ಆ್ಯಪ್ ನಂಬರ್ ಪಡೆಯಲು ಡಿಡಿಪಿಐ ಕಚೇರಿಯ ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಬಿ.ವೈ. ಭಜಂತ್ರಿ ಅವರ ಮೊಬೈಲ್ ಸಂಖ್ಯೆ : ೯೪೪೮೧೫೧೦೭೫ಗೆ ಸಂಪರ್ಕಿಸಬೇಕು.
ಜಿಲ್ಲೆಯ ಎಲ್ಲಾ ತಾಲೂಕುಗಳ ವಿದ್ಯಾರ್ಥಿಗಳು ತಮ್ಮ ಕಲಾಕೃತಿಗಳನ್ನು ಸಲ್ಲಿಸಲು ಅಗಸ್ಟ್ ೧೦ ಕೊನೆಯ ದಿನವಾಗಿದೆ ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.