ಧಾರವಾಡ prajakiran.com : ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶಗೌಡಗೌಡರ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಈ ಕುರಿತು ಗುರುವಾರ ವಿಚಾರಣೆ ನಡೆಸಿದ್ದ ಧಾರವಾಡದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು ಈ ಮಹತ್ವದ ತೀರ್ಪು ಹೊರಡಿಸಿದರು.
ಅ.೨೨ರಂದು ಗುರುವಾರ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಪ್ರಕರಣ
ಧಾರವಾಡದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ಎದುರು ವರ್ಗಾವಣೆಗೊಂಡಿತ್ತು.
ಅ.೨೩ರಂದು ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯ ಈ ಪ್ರಕರಣವನ್ನು ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.
ಅಲ್ಲದೆ, ಸಿಬಿಐ ಪರ ಅರ್ಜಿದಾರರ ವಿರುದ್ಧ ಪ್ರತಿವಾದ ಮಂಡಿಸಿದ ಸಿಬಿಐ ಪರ ವಿಶೇಷ ಅಭಿಯೋಜಕರು,
ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆಯಾದ ಸಂದರ್ಭದಲ್ಲಿ ಸದರಿ ಪೊಲೀಸ್
ಇನ್ಸೆಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಅವರು ಉದ್ದೇಶಪೂರ್ವಕವಾಗಿ ನೈಜ ಆರೋಪಿಗಳನ್ನು ಬಂಧಿಸುವ ಬದಲಿಗೆ ಪ್ರಕರಣದ ದಿಕ್ಕು ತಪ್ಪಿಸಿದ ಆರೋಪದ ಸೆಕ್ಷನ್ 201 ಮತ್ತು ಭ್ರಷ್ಟಾಚಾರ ನಿಷೇಧ ಕಾಯ್ದೆಯ ಅಡಿಯಲ್ಲಿ ಅಪರಾಧ ಎಸಗಿರುವುದಾಗಿ ನ್ಯಾಯಾಲಯದ
ಗಮನ ಸೆಳೆದಿದ್ದರು.
ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಸದರಿ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಮೂಲಕ ಸಿಬಿಐ ಪರ ವಿಶೇಷ ಅಭಿಯೋಜಕರ ಮನವಿಯನ್ನು ಸಿಬಿಐ ನ್ಯಾಯಾಲಯ ಎತ್ತಿ ಹಿಡಿದಂತಾಗಿದೆ.
ಇದೀಗ ಸಿಬಿಐ ನ್ಯಾಯಾಲಯವು ಯೋಗೀಶಗೌಡ ಗೌಡರ ಕೊಲೆಯಾದ ಸಂದರ್ಭದಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಆಗಿದ್ದ ತನಿಖಾಧಿಕಾರಿ ಚೆನ್ನಕೇಶವ ಟಿಂಗರೀಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದು ಬಂಧನ ಭೀತಿಯಲ್ಲಿರುವ ಅಂದಿನ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ, ಡಿಸಿಪಿ, ಎಸಿಪಿ, ಪೊಲೀಸ್ ಇನ್ಸಪೆಕ್ಟರ್ ಹಾಗೂ ಹಲವು ಪೊಲೀಸರಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.