ಧಾರವಾಡ prajakiran.com : ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಆಗ್ರಹಿಸಿ ವಿವಿಧ ಕೇಂದ್ರಗಳ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-೧೯ ರ ಹಿನ್ನಲೆಯಲ್ಲಿ ಕಳೆದ ಮಾರ್ಚ್ ೨೪ ರಿಂದ ಸರಕಾರದ ಆದೇಶದಂತೆ ನಗರದಲ್ಲಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವ ಕೇಂದ್ರಗಳ ಕಾರ್ಯಚಟುವಟಿಕೆಗಳನ್ನು ಸ್ಥಗಿರಗೊಳಿಸಲಾಗಿತ್ತು.
ಈ ಮಧ್ಯೆ ಹಲವಾರು ಸ್ಪರ್ಧಾತ್ಮಕ ಪರೀಕ್ಷಗೆಳು ನಡೆದಿವೆ. ಅಲ್ಲದೇ, ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.
ಈ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ವಿದ್ಯಾರ್ಥಿ ಸಮುದಾಯದಿಂದ ನಿರಂತರ ಮನವಿಗಳು ಬರುತ್ತಿವೆ.
ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳಿಗೆ ಬರುವವರು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರರು.
ಅಲ್ಲದೇ, ಮಾನಸಿಕವಾಗಿ ಪ್ರಬುದ್ಧರು ಇರುತ್ತಾರೆ. ಅವರು ಜವಾಬ್ದಾರಿಯಿಂದ ವರ್ತಿಸುವುದರಿಂದ ಕೊರೊನಾ ಹರಡುವಿಕೆಗೆ ಅವಕಾಶ ಇಲ್ಲದಂತಾಗುತ್ತದೆ.
ಜೊತೆಗೆ ಕೇಂದ್ರಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಲಾಗುವುದು.
ಈಗ ಪರಿಸ್ಥಿತಿ ಸುಧಾರಿಸಿದ್ದು, ಹಲವಾರು ಚಟುವಟಿಕೆಗಳನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಅನುಮತಿ ನೀಡಿದೆ.
ಈಗಾಗಲೇ ರಾಜ್ಯ ಸರಕಾರ ನ.೧೭ ರಿಂದ ಪದವಿ ಮತ್ತು ಸ್ನಾತಕೋತ್ತರ ತರಗತಿ ಆರಂಭಿಸಲು ಅನುಮತಿ ನೀಡಿದೆ.
ಆದ್ದರಿಂದ ನವ್ಹಂಬರ ೨ ರಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಲಕ್ಷ್ಮಣ ಉಪ್ಪಾರ, ಎನ್.ಎಂ.ಪಾಟೀಲ, ಮಲ್ಲನಗೌಡ ಗುಬ್ಬಿ, ಪ್ರದೀಪ ಗುಡ್ಡದ, ಶ್ರೀಶೈಲ ಚಾಂದಕವಟೆ, ಪಾರ್ಶ್ವನಾಥ ಪಾಲಭಾವಿ, ಸಿದ್ದಣ್ಣ ದಳವಾಯಿ, ಲಕ್ಕಪ್ಪ ಜರ್ಲಿ ಇನ್ನಿತರರು ಮನವಿ ಸಲ್ಲಿಸಿದರು.