ನವದೆಹಲಿ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 28ರಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿ, ಮಹತ್ವದ ಆದೇಶ ಹೊರಡಿಸಿತು.
ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಎ.ಎಂ. ಖಾನವಿಲಕರ, ದಿನೇಶ್ ಮಹೇಶ್ವರಿ, ಅನಿರುದ್ದ ಬೋಸ್ ಅವರು ಕರ್ನಾಟಕ ಸರ್ಕಾರ ಹಾಗೂ ಸಿಬಿಐ ಗೆ ನೋಟಿಸ್ ಜಾರಿಗೊಳಿಸಿ
ವಿಚಾರಣೆಯನ್ನು ಮುಂದೂಡಿದರು.
ಇದೇ ವೇಳೆ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರು ಪ್ರತ್ಯೇಕವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಈ ಪ್ರಕರಣದೊಂದಿಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿತು.
ಅಲ್ಲದೆ, ಈ ಹಿಂದೆ ರಾಜ್ಯ ಸರಕಾರ ಹಾಗೂ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಇದರೊಂದಿಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿತು.
ಆ ಮೂಲಕ ಸುಪ್ರೀಂಕೋರ್ಟ್ ಮುಂದೆ ವಿನಯ ಕುಲಕರ್ಣಿ ಪರ ವಕೀಲರ ವಾದ, ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ವಾದ ಹಾಗೂ ಸಿಬಿಐ ಪರ ವಕೀಲರ ಪ್ರತಿವಾದ ತೀವ್ರ ಕುತೂಹಲ ಕೆರಳಿಸಿದೆ.
ಇದರ ಮೇಲೆ ಅವರ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಅಂಗೀಕಾರ ವಾಗಲಿದೆಯೇ ಇಲ್ಲವೇ ಎಂಬುದನ್ನು ಸುಪ್ರೀಂಕೋರ್ಟ್ ಜು. 8 ರಂದು ನಿರ್ಧರಿಸಲಿದೆ.
ಈಗಾಗಲೇ ಯೋಗೀಶಗೌಡ ಗೌಡರ ಅನ್ನು 2016 ರ ಜೂನ್ 15 ರಂದು ಅಂದರೆ ಬರೋಬ್ಬರಿ ಐದು ವರ್ಷಗಳ ಹಿಂದೆ
ಕೊಲೆ ಮಾಡಿಸಿದ ಆರೋಪದ ಹಿನ್ನೆಲೆಯಲ್ಲಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯ, ಧಾರವಾಡ ಹೈಕೋರ್ಟ್, ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಬೆಂಗಳೂರು ಹೈಕೋರ್ಟ್ ತಿರಸ್ಕರಿಸಿದ್ದರು.
ಹೀಗಾಗಿ ಈ ಬಾರಿ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ಸಲ್ಲಿಸದೆ, ನೇರವಾಗಿ ಸುಪ್ರೀಂಕೋರ್ಟ್ ನಲ್ಲಿ ಸಿಬಿಐ ದಾಖಲಿಸಿರುವ ಪ್ರಕರಣವನ್ನೇ ರದ್ದು ಕೋರಿರುವುದು ಇಲ್ಲಿ ಗಮನಿಸಬಹುದಾಗಿದೆ.
ಕಳೆದ ವರ್ಷ ನವೆಂಬರ್ 5 ರಂದು ಧಾರವಾಡದ ಬಾರಾಕೋಟ್ರಿ ನಿವಾಸದ ಮೇಲೆ ರಾಕೇಶ್ ರಂಜನ್ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ತೆಗೆದುಕೊಂಡು ಆನಂತರ ಸಂಜೆ ವೇಳೆಗೆ
ಬಂಧಿಸಿರುವುದಾಗಿ ಧಾರವಾಡ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿ, ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿಗೆ ಕಳುಹಿಸಿದ್ದನ್ಬು ಇಲ್ಲಿ ಸ್ಮರಿಸಬಹುದು.