*ಧಾರವಾಡ ಎಂಟ್ರಿಗೆ ವಿನಯ ಕುಲಕರ್ಣಿ ಅರ್ಜಿ ಜೂ. 19ರಂದು ತೀರ್ಪು*
*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆ*
*ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾವಣೆಗೆ ಅವಕಾಶ ಕೋರಿ ಅರ್ಜಿ*
*ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ*
ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ಎರಡು ಪಕ್ಷದವರಿಗೆ ಒಂದೊಂದು ಮತವು ಅಮೂಲ್ಯವಾಗಿದೆ.
ಈಗಾಗಲೇ ಬಿಜೆಪಿ ಸದಸ್ಯರು ದಾಂಡೇಲಿ ರೆಸಾರ್ಟ್ ಸೇರಿ ಆಗಿದೆ.
ಕಾಂಗ್ರೆಸ್ ಪಕ್ಷದ ಸದಸ್ಯರು ಶತಾಯ ಗತಾಯ ಏನಾದರೂ ಮಾಡಿ ಮೇಯರ್ ಗದ್ದುಗೆ ಹಿಡಿಯಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬೆಂಬಲಿಗರ ಬೆಂಬಲ ಪಡೆಯಲು ಸರ್ಕಸ್ ನಡೆಸಿದ್ದಾರೆ.
ಹೀಗಾಗಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾವಣೆಗೆ ಅವಕಾಶ ಕೋರಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಜೂನ್ 15 ರಂದು ಅರ್ಜಿ ಸಲ್ಲಿಸಿದ್ದರು.
ಇಂದು ಶನಿವಾರ ಜೂ.17ರಂದು ವಿನಯ ಕುಲಕರ್ಣಿ ಅವರ ಪರ
ವಾದ ಹಾಗೂ ಸಿಬಿಐ ಪರ ಪ್ರತಿವಾದ ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
ಜೂ. 19ರಂದು ತೀರ್ಪು ನೀಡುವುದಾಗಿ ವಿಚಾರಣೆ ಮುಂದೂಡಿದೆ.
ಆ ತೀರ್ಪು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು.
ತೀವ್ರ ಕುತೂಹಲ ಕೆರಳಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿ ನತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.